ಮಂಗಳೂರು: ಪ್ರಮೋದ್ ಮುತಾಲಿಕ್ ನದ್ದು, ರಾಮಸೇನೆಯಲ್ಲ ಅವನದ್ದು ರಾವಣಸೇನೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್ ಹೇಳಿದರು.
ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಸ್ತಾನದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ. ಅವರನ್ನು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಒದ್ದು ಓಡಿಸಬೇಕು ಎಂದು ಹೇಳಿದ್ದರು. ಆದರೆ ಆ ಕೋಮುವಾದಿ, ಭಯೋತ್ಪಾದಕ ಪ್ರಮೋದ್ ಮುತಾಲಿಕ್ ನನ್ನೇ ಅಲ್ಲಿಗೆ ಒದ್ದು ಓಡಿಸಬೇಕು. ರಾಮಸೇನೆ ಹನುಮಂತನ ಸೇನೆ. ಪ್ರಮೋದ್ ಮುತಾಲಿಕ್ ನದ್ದು, ರಾಮಸೇನೆ ಆಗಲು ಸಾಧ್ಯವಿಲ್ಲ. ಅಂತಹ ಮನುಷ್ಯ ಬರುವುದನ್ನು ಉಡುಪಿಯಲ್ಲಿ ಬ್ಯಾನ್ ಮಾಡಲಾಯಿತು. ಆದರೆ ಈ ಭಯೋತ್ಪಾದಕ, ಕ್ರಿಮಿನಲ್, ಕೋಮುವಾದಿ ಬರುವಾಗ ಮಂಗಳೂರು ಪೊಲೀಸ್ ಕಮಿಷನರ್ ಕುರ್ಚಿ ಬಿಟ್ಟು ಎದ್ದು ನಿಂತು ಮಾತನಾಡುತ್ತಾರೆ. ಅದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಆಗ್ರಹಿಸಿದರು.
ಅದೇ ರೀತಿ ನಾವು ಆಜಾನ್ ವಿರೋಧಿಸಿ ಅದನ್ನು ಬಂದ್ ಮಾಡಲು ಬಂದವರನ್ನು ದನದ ಹಾಲು ನೀಡಿ ಸ್ವಾಗತಿಸಲು ತಿಳಿಸಿದ್ದೇವೆ. ಸರ್ಕಾರದ ಸುತ್ತೋಲೆ ಬರುವ ಮೊದಲೇ ಈಗಿನಿಂದಲೇ ನಗರದ ಕುದ್ರೋಳಿ ಜಾಮಿಯಾ ಮಸೀದಿಯ ಮೈಕ್ ಬಂದ್ ಮಾಡಲಾಗಿದೆ. ಐದು ಹೊತ್ತಿನ ಆಜಾನ್ ಗೂ ಧ್ವನಿವರ್ಧಕವನ್ನು ಬಂದ್ ಮಾಡಿದ್ದೇವೆ. ಇಂದಿನ ಪ್ರಾತಃಕಾಲದ ಆಜಾನ್ನಿಂದಲೇ ಮೈಕ್ ಸ್ಥಗಿತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ ಹೊರತು ಮೈಕ್ ಅಲ್ಲ ಎಂದು ಕೆ.ಎಸ್.ಮಸೂದ್ ಹೇಳಿದರು.