ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಪ್ಪನಾಡು ಬಂಡಸಾಲೆ ಬಳಿ ಸುಮಾರು ಹತ್ತರಿಂದ ಹದಿನೈದು ಮನೆಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಕಾಮಗಾರಿ ಅರ್ಧದಲ್ಲಿ ನಿಂತಿದ್ದು ಸ್ಥಳೀಯರು ಅತಂತ್ರರಾಗಿದ್ದಾರೆ.
ನೂತನ ರಸ್ತೆ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿದ್ದರಿಂದ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಮುಲ್ಕಿ ಬಸ್ಸು ನಿಲ್ದಾಣದ ಹೋಟೆಲ್ ಸಹಿತ ಇತರೆ ತ್ಯಾಜ್ಯ ನೀರು ತೆರೆದ ತೋಡಿನ ಮೂಲಕ ಬಂಡಸಾಲೆ ಬಳಿ ನದಿ ಸೇರುತ್ತಿದೆ. ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ರೋಗಗಳ ಭೀತಿ ಎದುರಾಗಿದೆ ಹಾಗೂ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರಾದ ನರೇಂದ್ರ ಮಾಧ್ಯಮದೊಂದಿಗೆ ಮಾತನಾಡಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಮುಂದಿನ ಮಳೆಗಾಲದಲ್ಲಿ ಕೃತಕ ನೆರೆ ಭೀತಿ ಎದುರಾಗಿದ್ದು ಕೂಡಲೇ ರಸ್ತೆ ಕಾಮಗಾರಿ ಯನ್ನು ಪೂರ್ತಿ ಗೊಳಿಸಬೇಕು ಹಾಗೂ ಮಲಿನ ನೀರಿನ ತೆರೆದ ತೋಡು ಅಪಾಯಕಾರಿಯಾಗಿದ್ದು ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಪರಿಸರದಲ್ಲಿ ಕುಡಿಯುವ ನೀರಿನ ಅಭಾವವಿದ್ದು ನಗರಪಂಚಾಯತ್ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.