ಹಾಸನ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ,ಮಾಜಿ ಸಚಿವ ಹೆಚ್ ಡಿ ರೇವಣ್ಣ ತವರು ಜಿಲ್ಲೆ ಹಾಸನದಲ್ಲಿ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಜಾತ್ರಾಮಹೋತ್ಸವದ ವ್ಯಾಪಾರದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ. ಜಾತ್ರೆ ವೇಳೆ ಮಸ್ಲಿಂರ ವ್ಯಾಪಾರ ವಹಿವಾಟು ಬಹಿಷ್ಕಾರದ ವಾತಾವರಣ ಕಂಡುಬರುತ್ತಿದೆ. ಜಾತ್ರೆ ವೇಳೆಯಲ್ಲಿ ವ್ಯಾಪಾರ ವಹಿವಾಟಿಗೆ ಅಲಿಖಿತ ನಿರ್ಬಂಧದ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ 13 ಮತ್ತು 14 ರಂದು ರಥೋತ್ಸವ, ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ಹಿನ್ನೆಲೆ ಮಳಿಗೆ ಜಾಗ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಹರಾಜಿನ ನಂತರವೂ ಯಾವೊಬ್ಬ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಮಳಿಗೆ ವ್ಯಾಪಾರಕ್ಕೆ ಪಡೆದಿಲ್ಲ.
1.25 ಲಕ್ಷಕ್ಕೆ ಗಿರೀಶ್ ಮತ್ತು ಸಿದ್ದೇಶ್ ಬಿಡ್ಡುದಾರರಿಗೆ ಮಳಿಗೆ ಜಾಗ ಸಿಕ್ಕಿದೆ. 12 ದಿನಗಳ ಕಾಲಕ್ಕೆ ಅಂಗಡಿ ಮಳಿಗೆ ಜಾಗ ಹರಾಜಿನಲ್ಲಿ ನೀಡಲಾಗಿದೆ. ಬಿಡ್ಡುದಾರರು ಮುಸ್ಲಿಂ ವ್ಯಾಪಾರಿಗಳಿಗೆ ಇದುವರೆಗೆ ಮಳಿಗೆ ನೀಡಿಲ್ಲ. ಬೇಲೂರು ಪುರಸಭೆ ವ್ಯಾಪ್ತಿಗೆ ಸೇರಿದ ವ್ಯಾಪಾರ ಮಳಿಗೆ ಜಾಗ ಇದಾಗಿದ್ದು, ಪುರಸಭೆಯಿಂದ ಹರಾಜು ನೀಡಲಾಗಿದೆ. ಬೇಲೂರು ಚನ್ನಕೇಶವ ಜಾತ್ರೆ ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ತಾಲ್ಲೂಕು ಆಡಳಿತಕ್ಕೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿತ್ತು.
ಮನವಿ ಹಿನ್ನೆಲೆ ಎಚ್ಚರಿಕೆ ಹೆಜ್ಜೆಯಿಡಲು ಬಿಡ್ ದಾರರು ನಿರ್ಧರಿಸಿದ್ದಾರೆ. ಈ ಬಾರಿ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಸಿಗುವುದಿಲ್ಲವೇ ಎಂಬ ಪ್ರಶ್ನೆ ಉದ್ಬವಿಸಿದೆ. ಹಾಸನ ಜಿಲ್ಲಾಡಳಿತ ಮುಸ್ಲಿಂರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಿತ್ತದೆಯಾ ಎಂಬುದನ್ನು ನೋಡಬೇಕಿದೆ. ಧರ್ಮ ದಂಗಲ್ ನಲ್ಲಿ ಬೇಲೂರಿನ ಮುಸ್ಲಿಂ ವ್ಯಾಪಾರಿಗಳು ಕಂಗಾಲಾದಂತೆ ಕಂಡುಬರುತ್ತಿದೆ. ಇದುವರೆಗೂ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಅಂಗಡಿ ಮಳಿಗೆಯನ್ನು ಪಡೆದಿಲ್ಲದಿರುವುದು,ಮುಸ್ಲಿಂ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆಯಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.