ಹಾಸನ: ಹೆತ್ತ ತಾಯಿಯನ್ನು ಮಗನೊಬ್ಬ ತಂದೆಯ ಜೊತೆ ಸೇರಿ ಉಸಿರುಗಟ್ಟಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಮರನಹಳ್ಳಿ ಗ್ರಾಮದ ನಿವಾಸಿ ಸುಶೀಲಮ್ಮ ಮೃತ ಪಟ್ಟ ದುರ್ದೈವಿ. ಮಗ ಮನೋಜ್ ಹಾಗೂ ಪತಿ ಮಂಜುನಾಥ್ ಪ್ರತಿ ದಿನ ಸುಶೀಲಮ್ಮನೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದರು. ಪತಿ ಮಂಜುನಾಥ್ಗೆ ಬೇರೆ ಸಂಬಧವಿದ್ದು, ಈ ಹಿನ್ನೆಲೆಯಲ್ಲಿ ಸುಶೀಲಮ್ಮ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದರು.
ಪ್ರತಿ ದಿನ ನೀಡುತ್ತಿದ್ದ ಕಿರುಕುಳದಿಂದ ನೊಂದಿದ್ದ ಸುಶೀಲಮ್ಮ ಗಂಡ ಹಾಗೂ ಮಗನಿಂದ ದೂರವಾಗಿ ಪ್ರತ್ಯೇಕವಾಗಿದ್ದರು. ಆದರೆ ಇದೀಗ ಗಂಡ ಹಾಗೂ ಮಗ ಸೇರಿ ಉಸಿರುಗಟ್ಟಿ ಸುಶೀಲಮ್ಮನ ಕೊಲೆ ಮಾಡಿದ್ದಾರೆ ಎಂದು ಸುಶೀಲಮ್ಮನ ಪುತ್ರಿ ಅನುಜಾ ಆರೋಪ ಮಾಡಿದ್ದಾರೆ.
ನನ್ನ ತಾಯಿ ನನಗೆ ಕರೆ ಮಾಡಿ ಗಂಡ ಹಾಗೂ ಮಗ ಹೊಡೆಯುತ್ತಿದ್ದಾರೆ ಎಂದು ಅಳಲಾರಂಭಿಸಿದರು. ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಅವರಿಬ್ಬರು ತಾಯಿಗೆ ಹೊಡೆಯುತ್ತಿದ್ದನ್ನು ನಾನು ಫೋನಿನಲ್ಲಿ ಕೇಳಿಸಿಕೊಂಡೆ. ಮನೆಗೆ ಬಂದು ನೋಡುವಷ್ಟರಲ್ಲಿ ತಾಯಿ ಮೃತಪಟ್ಟಿದ್ದರು ಎಂದು ಅನುಜಾ ಆರೋಪ ಮಾಡಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.