ಬೆಳಗಾವಿ: ಬೆಳಗಾವಿಯ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಘಟನೆ ಶನಿವಾರದಂದು ರಾತ್ರಿ ನಡೆದಿದೆ.
ಕೆಲ ವರ್ಷಗಳಿಂದ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ಶನಿವಾರ ರಾತ್ರಿ ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಗಲಾಟೆಯಾಗಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯನ್ನು ಗೌಂಡವಾಡ ಗ್ರಾಮದ ಪಾಟೀಲ ಮುಖಂಡ ಸತೀಶ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ದ್ವಿಚಕ್ರ ವಾಹನ ಸೇರಿದಂತೆ ಮೂರು ಹುಲ್ಲಿನ ಬಣವಿಗೆ ಕೂಡ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ, ಪಿ.ವಿ. ಸ್ನೇಹಾ, ಗ್ರಾಮೀಣ ಎಸಿಪಿ ಗುಡಾಜಿ ಹಾಗೂ ಕಾಕತಿ ಇಸ್ಪೆಕ್ಟರ್ ಗುರುನಾಥ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಆದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಗೌಂಡವಾಡ ಗ್ರಾಮದ ಬಿರ್ಜೆ ಕುಟುಂಬದವರು ಹಾಗೂ ಗ್ರಾಮಸ್ಥರ ಮಧ್ಯೆ ದೇವಸ್ಥಾನ ಜಾಗಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದರ ಕುರಿತು ಮೂರ್ನಾಲ್ಕು ಬಾರಿ ಗಲಾಟೆಯೂ ಆಗಿತ್ತು. ಸತೀಶ ಪಾಟೀಲ ಅವರು ಗ್ರಾಮಸ್ಥರ ಪರವಾಗಿ ನೇತೃತ್ವ ವಹಿಸಿದ್ದರು. ಇದು ಬಿರ್ಜೆ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಚಾರದ ಕುರಿತು ಆಗಾಗ ಸತೀಶನ ಮೇಲೆ ಕೆಂಡಕಾರುತ್ತಿದ್ದರು. ಆದರೆ ಶನಿವಾರದಂದು ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿ ಸತೀಶನನ್ನು ಹತ್ಯೆ ಮಾಡಲಾಗಿದೆ. ಇದರಿಂದ ಗ್ರಾಮದ ಅನೇಕರು ರೊಚ್ಚಿಗೆದ್ದು ಸಿಕ್ಕ ಸಿಕ್ಕ ವಾಹನಗಳಿಗೆ, ಹುಲ್ಲಿನ ಬಣವಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.