ಕಾಸರಗೋಡಿನಲ್ಲಿ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು,ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಎಂ.ಪ್ರಿಯೇಶ್ (32) ಎಂಬಾತ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ತೃಕ್ಕರಿಪುರ ಮಟ್ಟಮ್ಮಲ್ನಲ್ಲಿ ಪತ್ತೆಯಾಗಿದ್ದ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತೃಕ್ಕರಿಪುರ ಪಾರಪ್ಪಾಡ್ ನ ಮುಹಮ್ಮದ್ ಶಬಾಸ್ (22) ಮತ್ತು ಮುಹಮ್ಮದ್ ರಹನಾಸ್ (23) ಬಂಧಿತರು.ಇದೊಂದು ಕೊಲೆ ಕೃತ್ಯವಾಗಿದ್ದು, ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಸಫ್ವಾನ್ (25) ಸೇರಿ ಮೂವರಿಗೆ ಹುಡುಕಾಟ ಮುಂದುವರೆದಿದೆ.
ಮೃತ ಪ್ರಿಯೇಶ್ ಮನೆಯೊಂದರ ಬಳಿ ಸಂಶಯಾಸ್ಪದ ವಾಗಿ ಕಂಡು ಬಂದಿದ್ದನೆನ್ನಲಾಗಿದ್ದು, ಇದಕ್ಕಾಗಿ ಪ್ರಶ್ನಿಸಲು ತಂಡ ಮೊಬೈಲ್ ಗೆ ಕರೆ ಮಾಡಿ ಪ್ರಿಯೇಶ್ ನನ್ನು ಕರೆಸಿದ್ದು, ಬೈಕ್ ನಲ್ಲಿ ತೆರಳಿದ್ದ ಪ್ರಿಯೇಶ್ ಗೆ ಥಳಿಸಲಾಗಿತ್ತು.
ಪ್ರಿಯೇಶ್ ಮೃತಪಟ್ಟಿರುವುದನ್ನು ಖಚಿತಪಡಿಸಿದ ತಂಡ ಆತನ ಮನೆ ಸಮೀಪ ಬೈಕ್ನಲ್ಲಿ ತಂದು ಮೃತದೇಹವನ್ನು ಬಿಟ್ಟು ಹೋಗಿದ್ದಾರೆ. ತನಿಖೆಯ ವೇಳೆ ಕೊಲೆ ಕೃತ್ಯವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇನ್ನು ಮೃತ ಪ್ರಿಯೇಶ್ ನ ಮೊಬೈಲ್ ಫೋನ್ ನ್ನು ಆರೋಪಿಯೋರ್ವನ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.