ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಲೆಯಡ್ಕದಲ್ಲಿ ಮುಗ್ರೋಡಿ ಕನ್ ಸ್ಟ್ರಕ್ಷನ್ ನಡೆಸುತ್ತಿರುವ ಹಾಟ್ ಮಿಕ್ಸ್ ಘಟಕದಿಂದ ಸುತ್ತಮುತ್ತದ ಪರಿಸರದಲ್ಲಿ ಭಾರೀ ಪ್ರಮಾಣದ ತೊಂದರೆಯಾಗಿದೆ ಎನ್ನಲಾಗಿದ್ದು, ಉಸಿರುಗಟ್ಟಿಸುವ ವಾತಾವರಣ, ಜಲಚರಗಳ ಸಾವು, ರಾಸಾಯನಿಕಯುಕ್ತ ನೀರಿನ ಹೊರಹರಿವು, ಅವ್ಯಾಹತ ವಾಯುಮಾಲಿನ್ಯದ ವಿರುದ್ದ ಗಿರಿಜನರು ‘ಗುಮ್ಮಟೆ ಚಳುವಳಿ’ಗೆ ಮುಂದಾಗಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನೀಡಿರುವ ನೋಟೀಸ್ ಗೂ ಲೆಕ್ಕಿಸದೆ ಸುರಕ್ಷಾ ನಿಯಮ ಗಾಳಿಗೆ ತೂರಿ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಹಾಟ್ ಮಿಕ್ಸಿಂಗ್ ಘಟಕವನ್ನು ರದ್ದುಗೊಳಿಸುವಂತೆ ಬುಡಕಟ್ಟು ಜನರು ಮೊದಲ ಹಂತದಲ್ಲಿ ನಡ ಪಂಚಾಯತ್ ಕಛೇರಿ ಎದುರು ಗುಮ್ಮಟೆ ಹಿಡಿದು ಪ್ರತಿಭಟಿಸಲಿದ್ದಾರೆ.
ಜನವರಿ 13 ಮಂಗಳವಾರ ಬೆಳಗ್ಗೆ ಪ್ರತಿಭಟನೆಗೆ ಕರೆ ನೀಡಲಾಗಿದ್ದು ಅನ್ಯಾಯದ ವಿರುದ್ದ ಧ್ವನಿಯೆತ್ತಿ, ಪ್ಲ್ಯಾಂಟ್ ರದ್ದತಿಗೆ ಆಗ್ರಹಿಸಲಿದ್ದಾರೆ. ಗುಮ್ಮಟೆ ಎಂಬುದು ಛತ್ರಪತಿ ಶಿವಾಜಿ ವಂಶದ ಬುಡಕಟ್ಟು ಸಮುದಾಯವಾದ ಮರಾಟಿ ನಾಯ್ಕರ ಒಂದು ಸಾಂಪ್ರದಾಯಿಕ ವಾದ್ಯ ಪರಿಕರವಾಗಿ ಪ್ರಸಿದ್ದಿ ಪಡೆದಿದ್ದು. ಬೈರವ, ಮತ್ತು ಮಹಮ್ಮಾಯಿ ಗೋಂದೋಲು ಪೂಜೆ, ಪುರುಷರ ಪೂಜೆಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಈ ಹಿಂದೆ ಮಂಗನ ಕಾಯಿಲೆ ವ್ಯಾಪಿಸಿ ಜನಸಾಮಾನ್ಯರ ಅವಗಣನೆಯಾದಾಗ ವಸಂತ ಬಂಗೇರರ ಕಾಲದಲ್ಲಿ ಗಿರಿಜನರು ಗುಮ್ಮಟೆಯನ್ನು ಬಡಿದು ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತಾಗಿದೆ.


