ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ ಹತ್ಯೆಗೆ ಮೂವರು ಶೂಟರ್ಗಳನ್ನು ಕಳುಹಿಸಿದ್ದ ಪ್ರಮುಖ ಆರೋಪಿ, ಮುಂಬೈನ ನಟೋರಿಯಸ್ ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ (35)ನನ್ನು ಪೊಲೀಸರು ಹೆಬ್ರಿ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಆಗಸ್ಟ್ 7ರಂದು ಮಧ್ಯಾಹ್ನ ಸೇಂಟ್ ಕ್ಲೀವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿದ್ದ ‘ಪ್ರಿನ್ಸ್ ಎಂಟರ್ಪ್ರೈಸಸ್’ ಮಾಲೀಕ ಡೇವಿಡ್ ಅವರ ತಲೆಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದು, ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಕುಂದಾಪುರ ಪಿಎಸ್ಐ ನಂಜ ನಾಯಕ್ ಹಾಗೂ ಕೊಲ್ಲೂರು ಪಿಎಸ್ಐ ವಿನಯ್ ಅವರ ತಂಡ ಸೋಮವಾರ ಮುಂಜಾನೆ ಆರೋಪಿಯನ್ನು ವಶಕ್ಕೆ ಪಡೆದಿದೆ.
ಬಂಧಿಸಿ ಕರೆತರುವಾಗ ಅನುಜ್ ಪೊಲೀಸರ ಮೇಲೆಯೇ ದಾಳಿ ನಡೆಸಿ, ಪಿಎಸ್ಐ ವಿನಯ್ ಅವರ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ಐ ನಂಜ ನಾಯಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಅನುಜ್ನನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. 2017ರಿಂದ ಕಾನೂನಿನ ಕಣ್ಣು ತಪ್ಪಿಸಿ ಮುಂಬೈನಲ್ಲಿ ಅಂಡರ್ವರ್ಲ್ಡ್ ಚಟುವಟಿಕೆ ನಡೆಸುತ್ತಿದ್ದ ಈತನ ವಿರುದ್ಧ MCOCA ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ ಗುಜರಾತ್ (5), ಮಹಾರಾಷ್ಟ್ರ (4), ದಮನ್ ಮತ್ತು ದಿಯು (1) ಹಾಗೂ ಕರ್ನಾಟಕ (1) ಸೇರಿದಂತೆ ದೇಶಾದ್ಯಂತ ಒಟ್ಟು 11 ಗಂಭೀರ ಪ್ರಕರಣಗಳಿದ್ದು, ಅದರಲ್ಲಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಯಡಿಯೇ ದಾಖಲಾಗಿವೆ.


