ಬೆಂಗಳೂರು: ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್ ಅವರು ಕೊವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಅವರು, ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ್ದೇನೆ. ಇದೀಗ ನನ್ನ ಕೊವಿಡ್-19 ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ಸೋಂಕಿನಿಂದ ಸಂಪೂರ್ಣ ಮುಕ್ತಳಾಗಿದ್ದೇನೆ. ವೈದ್ಯರ ಸಲಹೆಯಂತೆ ಇನ್ನೂ ನಾಲ್ಕು ವಾರಗಳ ವಿಶ್ರಾಂತಿ ಪಡೆದು, ಮತ್ತೆ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತೇನೆ. ಜನರ ಸೇವೆ ಮಾಡಲು ಕಾತರಳಾಗಿದ್ದೇನೆ ಎಂದು ಬರೆದಿದ್ದಾರೆ.
ದೇಹಕ್ಕೆ ಚೈತನ್ಯ ತುಂಬಲು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಆರೋಗ್ಯಕ್ಕಾಗಿ ನೀವೆಲ್ಲ ಪ್ರಾರ್ಥಿಸಿದ್ದೀರಿ. ಶೀಘ್ರವೇ ಗುಣಮುಖರಾಗಿ ಎಂದು ಶುಭ ಹಾರೈಸಿದ್ದೀರಿ. ದೇವರ ಅನುಗ್ರಹದ ಜತೆಗೆ ವೈದ್ಯರಾದ ಡಾ. ಸತೀಶ್ ಅವರು ನೀಡಿದ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತುಂಬಿದೆ. ಕರೊನಾ ಗೆದ್ದು ಬರಲು ಸಹಾರಿಯಾದವು ಎಂದು ಸುಮಲತಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಸುಮಲತಾ ಅವರಿಗೆ ಜು.6ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆದಿದ್ದರು.