ಚಿಕ್ಕಮಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 2020ರ ಈ ಶೈಕ್ಷಣಿಕ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಣೆ ಮಾಡುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, 2020 ಜೀವ ಉಳಿಸುವ ವರ್ಷವಾಗಿದೆ, ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ನಡೆಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸುವುದು ಬೇಡ. ಆನ್ಲೈನ್ನಲ್ಲಿ ತರಗತಿಗಳನ್ನು ಮುಂದುವರೆಸುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.
ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸುತ್ತಿದೆ. ಶಿಕ್ಷಕರು ದೇಶದ ಆಸ್ತಿ, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನು ಖಾಯಿಲೆ ಅಥವ ಸಮಸ್ಯೆಗೆ ದೂಡುವ ಮನಸ್ಥಿತಿಯಲ್ಲಿಲ್ಲ. ರಾಜ್ಯ ಸರ್ಕಾರ ಶಿಕ್ಷಕರ ಬಗ್ಗೆಯೂ ಕಾಳಜಿ ವಹಿಸಬೇಕು, ಶಿಕ್ಷಕರ ರಕ್ಷಣೆ, ಜೀವ ಉಳಿಸಲು ಆದ್ಯತೆ ನೀಡಬೇಕು ಎಂದು ಸಂಸದೆ ಶೋಭಾ ಹೇಳಿದರು.