ಕೇರಳದ ಮನ್ನರ್ಕ್ಕಾಡ್ನ ಬಸ್ ನಿಲ್ಧಾಣದಲ್ಲಿ ಬಾಲಕ ಮತ್ತು ಬಾಲಕಿ ಜೊತೆಯಲ್ಲಿ ನಿಂತಿದ್ದರು ಎಂಬ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯೂಸಿ), ಪ್ರತಿ ಮಗುವೂ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅರ್ಹರು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸೋಮವಾರ ಹೇಳಿದೆ.
ಈ ಕುರಿತಂತೆ ಪಾಲಕ್ಕಾಡ್ನ ಸಿಡಬ್ಲ್ಯೂಸಿ ಅಧ್ಯಕ್ಷ ಎಂ ವಿ ಮೋಹನನ್ ಟಿವಿ ವಾಹಿನಿಯೊಂದರಲ್ಲಿ,”ಪ್ರತಿ ಮಗುವಿನ ವಯಸ್ಸು ಏನೇ ಇರಲಿ, ಅವರು ಕೇವಲ ಮಕ್ಕಳಲ್ಲ. ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅವಕಾಶ ಸಿಗುವ ಹಕ್ಕನ್ನು ಹೊಂದಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಇನ್ನೂ ಅರಿವು ಬಂದಿಲ್ಲ. ಅವರಿಗೆ ಜಾಗೃತಿ ಮೂಡಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಘಟನೆಯಲ್ಲಿ ಹಲ್ಲೆಗೊಳಗಾದ ಮಕ್ಕಳಿಗೆ ಅಗತ್ಯ ಬಿದ್ದರೆ, ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಿಂದ ವರದಿ ನೀಡುವಂತೆ ಹೇಳಿದ್ದಾರೆ. ಹಲ್ಲೆ ನಡೆಸಿರುವಂತಹ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಯಿಂದ ಇನ್ನೊಬ್ಬ ವ್ಯಕ್ತಿ ಭಾಗಿಯಾಗಿರುವ ಬಗ್ಗೆ ಅನುಮಾನವಿದೆ. ಜೊತೆಗೆ ಹಲ್ಲೆಗೊಳಗಾದ ಶಾಲಾ ಮಕ್ಕಳ ಸುರಕ್ಷತೆಗಾಗಿ ಲಿಖಿತ ರೂಪದಲ್ಲಿ ವಿನಂತಿ ಸಲ್ಲಿಸಿದ ನಂತರ ಸಿಡಬ್ಲ್ಯುಸಿ, ಪೊಲೀಸ್ ರಕ್ಷಣೆ ಸೇರಿದಂತೆ ಅಗತ್ಯ ನೆರವು ನೀಡಲಿದೆ” ಎಂದು ಪೋಲಿಸರು ವರದಿ ನೀಡಿದ್ದಾರೆಂದು ಮೋಹನನ್ ತಿಳಿಸಿದ್ದಾರೆ.