ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ ಸಮಕ್ಷಮವೇ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ನೈತಿಕ ಪೊಲೀಸಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಥಿಕಲ್ ಪೊಲೀಸರ ಐವರನ್ನು ಬಂಧಿಸಿದ್ದಾರೆ.
ನಗರದ ಎನ್ಐಟಿಕೆ ಸುರತ್ಕಲ್ ಟೋಲ್ ಗೇಟ್ ಬಳಿ ಭಾನುವಾರ ಸಂಜೆ ಬೊಲೆರೋ ವಾಹನದಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರ ಕಾರ್ಯಕರ್ತರ ತಂಡ ದಾಳಿ ನಡೆಸಿದ್ದಾರೆ.
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ನಿನ್ನೆ ಸಾಯಂಕಾಲ ಸಮುದ್ರ ತೀರಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಈ ಭಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಈ ವಾಹನದ ಹಿಂದೆಯೇ ನಗರದ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಕೂಡ ತಮ್ಮ ಕಾರಿನಲ್ಲಿ ಬರುತ್ತಿದ್ದರು.ಸಂಘಪರಿವಾರ ಯುವಕರು ಬೊಲೆರೋ ಗಾಡಿಯನ್ನು ಅಡ್ಡಗಟ್ಟಿದಾಗ ಅಧಿಕಾರಿ ಹಲ್ಲೆ ತಡೆಯಲು ಯತ್ನಿಸಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕಾರೊಂದಕ್ಕೆ ಗುಂಪೊಂದು ಮುತ್ತಿಗೆ ಹಾಕಿರುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ದೇರಳಕಟ್ಟೆಯ ಕಾಲೇಜೊಂದರ ವಿದ್ಯಾರ್ಥಿನಿಯರು ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ ತಿರುಗಾಡುತ್ತಿದ್ದ ಅನುಮಾನದ ಮೇಲೆ ಈ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ವಾಹನದಲ್ಲಿ ಹಿಂದು ಹುಡುಗಿಯರಿಲ್ಲದಿದ್ದರೂ ತಪ್ಪು ಮಾಹಿತಿ ಮೇಲೆ ವಾಹನದ ಮೇಲೆ ದಾಳಿ ನಡೆಸಿರುವುದಾಗಿಯೂ ಹೇಳಲಾಗಿದೆ.