ಮಂಗಳೂರು: ‘ಟೀನ್ ತುಳುನಾಡ್ -2020’ರ ಅಂತಿಮ -5 ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದ, ಇಲ್ಲಿನ ಕುಂಪಲದ ಆಶ್ರಯ ಕಾಲೊನಿಯ ಪ್ರೇಕ್ಷಾ (17) ಮೃತದೇಹವು ನಿನ್ನೆ ಆಕೆಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತನಾಗಿದ್ದ ಮುಂಡೋಳಿಯ ಯತೀನ್ರಾಜ್ ಹಾಗೂ ಆಶ್ರಯ ಕಾಲೊನಿಯ ಸೌರಭ್ ಮತ್ತು ಸುಹಾನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಘಟನೆಗೆ ಬೆಳಕಿಗೆ ಬರುವ ಸ್ವಲ್ಪ ಮೊದಲು ಈ ಮೂವರು ಮನೆ ಮುಂದೆ ಸುತ್ತಾಡಿದ್ದರು’ ಎಂಬ ಸ್ಥಳೀಯರ ಮಾಹಿತಿ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಗೂ ಮೊದಲು ಪ್ರೇಕ್ಷಾ ಈ ಪೈಕಿ ಒಬ್ಬರಿಗೆ ಕರೆ ಮಾಡಿದ್ದಳೇ? ಎಂಬ ಶಂಕೆ ವ್ಯಕ್ತವಾಗಿದೆ.
ಪ್ರೇಕ್ಷಾ, ಕುಂಪಲದ ಆಶ್ರಯ ಕಾಲೊನಿಯ ಚಿತ್ತಪ್ರಸಾದ್ ಮತ್ತು ಕವಿತಾ ದಂಪತಿ ಪುತ್ರಿ. ತಂದೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುತ್ತಿದ್ದರೆ, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು. ಇನ್ನೊಬ್ಬಳು ಸಹೋದರಿ ವಿದ್ಯಾರ್ಥಿನಿಯಾಗಿದ್ದಾರೆ. ಮನೆಯವರು ಇಲ್ಲದ ಸಂದರ್ಭ ಘಟನೆ ನಡೆದಿದೆ.
‘ಮಧ್ಯಾಹ್ನ ಮನೆಗೆ ಬಂದಾಗ, ಮುಂಬಾಗಿಲು ಮುಚ್ಚಿದ್ದು, ಹಿಂಬಾಗಿಲು ತೆರೆದಿತ್ತು. ಒಳಪ್ರವೇಶಿಸಿದಾಗ ಮಂಚದ ಕೋಣೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಮೃತಪಟ್ಟಿದ್ದಳು’ ಎಂದು ತಾಯಿ ಕವಿತಾ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ‘ಪ್ರೇಕ್ಷಾಳ ತಾಯಿ ಜತೆಗೆ ಮಾತನಾಡಿದ್ದೇನೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದಿದೆ’ ಎಂದರು.
ಬೆರಳಚ್ಚು ತಜ್ಞರು, ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.