
ಮಂಡ್ಯ: ನಗರದಲ್ಲಿ ಪತ್ರಕರ್ತರಿಗಾಗೇ ಆಯೋಜಿಸಲಾಗಿದ್ದಂತ ಕೋವಿಡ್-19 ತಪಾಸಣೆಗೆ ಅಡ್ಡಿಪಡಿಸಿದ್ದಲ್ಲದೇ, ಪತ್ರಕರ್ತರ ಮೇಲೆ ಹಲ್ಲೆ ನಡೆಯಿದ ಪ್ರಕರಣದಲ್ಲಿ ಎಂ ಎಲ್ ಸಿ ಶ್ರೀಕಂಠೇಗೌಡ ಮತ್ತು ಐವರಿಗೆ ಜಾಮೀನು ನೀಡಲಾಗಿದೆ.
10,000 ರೂ ಭದ್ರತೆಯೊಂದಿಗೆ ಎಂ ಎಲ್ ಸಿ ಶ್ರೀಕಂಠೇಗೌಡ ಮತ್ತು ಐವರಿಗೆ ಜಾಮೀನು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ನೀಡಲು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ನಿರಾಕರಣೆ ಮಾಡಿದ್ದರು. ಆದರೆ ಕೊನೆಗೆ ಮಂಡ್ಯದ ಜೆಎಂಎಫ್ ಸಿ ಕೋರ್ಟ್ ಕೆಲವು ಷರತ್ತುಗಳೊಂದಿಗೆ ಜಾಮೀನು ನೀಡಿದೆ.
10 ಸಾವಿರ ಭದ್ರತೆಯೊಂದಿಗೆ, ಜೊತೆಗೆ ಅವಶ್ಯಕತೆಯಿದ್ದಾಗ ನ್ಯಾಯಾಯಲಕ್ಕೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತುಬದ್ದ ಜಾಮೀನನ್ನು ಕೋರ್ಟ್ ನೀಡಿದೆ.
ಘಟನೆ ಹಿನ್ನೆಲೆ
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗಾಗೇ ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೋವಿಡ್-19 ಪರೀಕ್ಷೆ ನಡೆಸಲು ಆಯೋಜಿಸಲಾಗಿತ್ತು. ಇಲ್ಲಿಗೆ ತೆರಳಿದ್ದಂತ ಎಂ ಎಲ್ ಸಿ ಶ್ರೀಕಂಠೇಗೌಡ ಮತ್ತು ಅವರ ಬೆಂಬಲಿಗರು, ಪರೀಕ್ಷೆಗೆ ಅಡ್ಡಿಪಡಿಸಿದ್ದಲ್ಲದೇ, ಪತ್ರಕರ್ತರೊಬ್ಬರ ಮೇಲೆ ಶ್ರೀಕಂಠೇಗೌಡರ ಮಗ ಕೃಷಿಕ್ ಗೌಡ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.


