ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿಡ್ಕ ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ತಮ್ಮ ಸ್ವಾಧೀನ ಮಾಡಿದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಫೌಂಡೇಶನ್ ಕಿತ್ತೆಸೆದಿರುವ ಘಟನೆ ಅ.06ರಂದು ನಡೆದಿತ್ತು.
ಈ ಘಟನೆಯ ಬಗ್ಗೆ ಅ.7 ರಂದು ಬೆಳ್ತಂಗಡಿ ಶಾಸಕರು ನಿಗ ವಹಿಸಿ ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಯ ಸಚಿವರ ಜೊತೆ ಫೋನ್ ಕರೆ ಮೂಲಕ ಮಾತನಾಡಿದ್ದು ಸಚಿವರು ಅಧಿಕಾರಿಗಳಿಗೆ ಯತಾಸ್ಥಿತಿ ಕಾಪಾಡಲು ಸೂಚಿಸಿದಲ್ಲದೆ ಮೇಲಾಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು.
ಆದರೆ ಅ.09ರಂದು ಬೆಳಗ್ಗೆ ಮತ್ತೆ ಅಧಿಕಾರಿಗಳು ಮನೆ ತೆರವು ಮಾಡಲು ಬಂದಿದ್ದು ಬೆಳ್ತಂಗಡಿ ಶಾಸಕರ ಜೊತೆ ಮಾತಿನ ಚಕಮಖಿ ನಡೆಸಿದ್ದಾರೆ. ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಹಾಗೂ ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್ ನಡುವೆ ಹೊಯಿಕೈ ನಡೆಯಿತು. ಈ ವೇಳೆ ಬೆಳ್ತಂಗಡಿ ಶಾಕಸ ಹರೀಶ್ ಪೂಂಜ ಉಪ್ಪಿನಂಗಡಿ ಅರಣ್ಯಾಧಿಕಾರಿಗೆ ಲೋಫರ್ ಎಂದು ಗದರಿಸಿದ ಘಟನೆ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಇನ್ನೂ ಅನೇಕರು ಘಟನಾ ಸ್ಥಳದಲ್ಲಿದ್ದು ಗಂಭೀರ ಮಾತುಕತೆ ನಡೆಯುತ್ತಿದೆ. ಸ್ಥಳದಲ್ಲಿ ಮೂರು ಕೆ.ಎಸ್.ಆರ್.ಪಿ ತುಕಡಿ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ಬೆಳ್ತಂಗಡಿ , ಧರ್ಮಸ್ಥಳ , ಪುಂಜಾಲಕಟ್ಟೆ , ವೇಣೂರು ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಮೊಕ್ಕಂ ಹುಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳಾದ ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಮ್ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದಾರೆ.