ಬೆಂಗಳೂರು: ಮಂಗಳೂರು ನಗರದಲ್ಲಿ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನಲ್ಲಿ ತರುವುದು ಹಾಗೂ ಸುಪ್ರಿಂ ಕೋರ್ಟ್ ಆದೇಶದನ್ವಯ ಬಸ್, ಲಾರಿ ಮತ್ತು ಆಟೋ ರಿಕ್ಷಾ ಮುಂತಾದ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಳವಡಿಸುವ ಕುರಿತು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿಧಾನಸೌಧದಲ್ಲಿ ಇಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಮಂಗಳೂರು ನಗರದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನೊಳಗೆ ತರದಿರುವ ಕಾರಣ ಇಂಧನ ಚಾಲಿತ ರಿಕ್ಷಾ ಚಾಲಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಜೊತೆ ಶಾಸಕ ವೇದವ್ಯಾಸ ಕಾಮತ್ ಚರ್ಚೆ ನಡೆಸಿದರು.
ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದಂತೆ ಬಸ್, ಲಾರಿ ಹಾಗೂ ಆಟೋ ರಿಕ್ಷಾ ಸೇರಿದಂತೆ ವಾಹನಗಳಿಗೆ ಪ್ರತಿಫಲನ ಸ್ಟಿಕ್ಕರ್ ಅಳವಡಿಸುವ ಕುರಿತು ಕೂಡಾ ಚರ್ಚೆ ನಡೆಯಿತು. ಈ ವೇಳೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ ಪ್ರಸಾದ್, ಹೆಚ್ಚುವರಿ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್, ಆಯುಕ್ತ ಟಿ.ಎಚ್.ಎಂ ಕುಮಾರ್, ಬಸ್ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಉಪಸ್ಥಿತರಿದ್ದರು.