ಮಂಗಳೂರು: ಹಿಜಾಬ್ ವಿಚಾರದಲ್ಲಿ ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ಉಪ ನಾಯಕ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ನಡೆಸಿದ ಸುದ್ದಿಗೋಷ್ಟಿಯಲ್ಲಿನ ಹೇಳಿಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖಾದರ್ ಸ್ಪಷ್ಟೀಕರಣ ನೀಡಿದ್ದಾರೆ.
ಕೆಲವರು ನನ್ನ ಹೇಳಿಕೆಯ ದುರ್ಲಾಭ ಪಡೆದು ತಮ್ಮ ವಿಕೃತ ಮನಸ್ಸು ಪ್ರದರ್ಶಿಸಿದ್ದಾರೆ, ನಾನು ಹಿಜಾಬ್ ಧರಿಸುವ ಸಹೋದರಿಯರಿಗೆ ಯಾವುದೇ ಮಾತು ಹೇಳಿಲ್ಲ, ನನ್ನ ಮಗಳು ಕೂಡ ಹಿಜಾಬ್ ಧರಿಸುತ್ತಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕೆಲವು ಸ್ಥಾಪಿತ ಹಿತಾಸಕ್ತಿಗಳು ಹಿಜಾಬ್ ಸಮಸ್ಯೆ ಬಗೆಹರಿಸದೇ ಜೀವಂತವಾಗಿ ಇಟ್ಟಿವೆ, ಕಾನೂನಿಗೆ ಗೌರವ ಕೊಡದೇ ತಮ್ಮ ವ್ಯಕ್ತಿತ್ವ ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಖಾದರ್ ಹೇಳಿದ್ದಾರೆ.
ಭಾರತ ದೇಶದ ಕಾನೂನು, ಸಂಸ್ಕೃತಿ ಮತ್ತು ಸೌಂದರ್ಯ ನಮಗೆ ಗೊತ್ತಾಗಬೇಕಾದ್ರೆ.
ಅಂಥವರು ಪಾಕಿಸ್ತಾನ ಅಥವಾ ಸೌದಿಗೆ ಹೋದರೆ ನಮ್ಮ ದೇಶದ ಸಂಸ್ಕೃತಿ ನಮಗೆ ತಿಳಿಯುತ್ತದೆ, ಇದು ಸಮಸ್ಯೆ ಸೃಷ್ಟಿಸುವವರಿಗೆ ಮಾತ್ರ ಸೀಮಿತವಾದ ವಿಚಾರ ಎಂದು ವೀಡಿಯೋ ಹೇಳಿಕೆ ಮೂಲಕ ತಮ್ಮ ಸುದ್ದಿ ಗೋಷ್ಠಿ ಬಗ್ಗೆ ಯು.ಟಿ. ಖಾದರ್ ಸ್ಪಷ್ಟೀಕರಣ ನೀಡಿದ್ದಾರೆ.