ಬೆಳಗಾವಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯ ಹೆಸರು ನಾಮಕರಣ ಮಾಡುವಂತೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಸುನೀಲ್ ಕುಮಾರ್ ಈ ಆಗ್ರಹ ಮಾಡಿದ್ದಾರೆ.
ಇದೇ ವೇಳೆ ಮಂಗಳೂರು ಏರ್ ಪೋರ್ಟ್ ಗೆ ವೀರ ರಾಣಿ ಅಬ್ಬಕ್ಕ ಹೆಸರು ಇಡುವ ಬಗ್ಗೆಯೂ ಪ್ರಸ್ತಾಪ ಇದ್ದು, ಈ ಬಗ್ಗೆ ನಾವು ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸುವ ವೇಳೆ ಈ ಒತ್ತಾಯ ವ್ಯಕ್ತವಾಗಿದೆ.
ಶಿವಮೊಗ್ಗ ಏರ್ ಪೋರ್ಟ್ ಗೆ ಕುವೆಂಪು, ಹುಬ್ಬಳ್ಳಿ ಏರ್ ಪೋರ್ಟ್ ಗೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ಏರ್ ಪೋರ್ಟ್ ಗೆ ಕಿತ್ತೂರು ಚೆನ್ನಮ್ಮ ಮತ್ತು ವಿಜಯಪುರ ಏರ್ ಪೋರ್ಟ್ ಗೆ ಬಸವೇಶ್ವರ ಹೆಸರಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಗುರುವಾರ ವಿಧಾನಸಭೆ ಅಂಗೀಕರಿಸಿದೆ.