ದಾವಣಗೆರೆ: ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಶವ ಪತ್ತೆಯಾಗಿದೆ. ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರ ಕಾರು ಹೊನ್ನಾಳಿ ಬಳಿ ತುಂಗಭದ್ರಾ ಚಾನಲ್ನಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ.
ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ ಸಂಬಂಧ ಪೊಲಿಸರು ಪರಿಶೀಲನೆ ನಡೆಸಿದಾಗ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಮುಖ್ಯ ಕಾಲುವೆಯಲ್ಲಿ ಚಂದ್ರಶೇಖರ್ ಬಿಳಿ ಬಣ್ಣದ ಕಾರು ಪತ್ತೆಯಾಗಿದೆ.
ಕಳೆದ ಭಾನುವಾರ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.ನಂತರ ಇವರ ಸುಳಿವೆ ಸಿಕ್ಕಿರಲಿಲ್ಲ. ಚಂದ್ರು ಪ್ರಯಾಣಿಸುತ್ತಿದ್ದ ಕಾರು ಶಿವಮೊಗ್ಗದ ಮೂಲಕ ಹಾದು ಹೋಗುವ ದೃಶ್ಯಗಳು ಪತ್ತೆಯಾಗಿದ್ದವು. ಈ ನಡುವೆ ಕಿಡ್ನಾಪ್ ಆಗಿರುವ ಅನುಮಾನವೂ ಮೂಡಿತ್ತು. ಇದೀಗ ತುಂಗಭದ್ರಾ ಕಾಲುವೆಯಲ್ಲಿ ಕಾರು ಪತ್ತೆಯಾಗುವ ಮೂಲಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದಂತಾಗಿದೆ.