ಬೆಳ್ತಂಗಡಿ: ಕಳೆದ ಮಳೆಗಾಲದ ಸಂದರ್ಭ ತಾಲೂಕಿನಾದ್ಯಂತ ಸಂಭವಿಸಿದ ಪ್ರವಾಹದಿಂದಾಗಿ ಚಾರ್ಮಾಡಿ ವ್ಯಾಪ್ತಿಯಲ್ಲೂ ಮೃತ್ಯುಂಜಯ ನದಿಯ ನೆರೆಯಿಂದಾಗಿ ಕೊಚ್ಚಿ ಹೋದ ಸೇತುವೆ, ರಸ್ತೆ ಹಾಗೂ ತಡೆಗೋಡೆಗಳ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶಾಸಕ ಹರೀಶ್ ಪೂಂಜ ಅವರು ವೀಕ್ಷಣೆ ನಡೆಸಿದರು.
ಕಿರು ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಗಳ ವಿವಿಧ ಯೋಜನೆಗಳಡಿ ರಸ್ತೆ, ಸೇತುವೆ, ತಡೆಗೋಡೆಗಳ ಕಾಮಗಾರಿಗಳಿಗೆ ಅನುದಾನಗಳು ಮಂಜೂರುಗೊಂಡಿದ್ದು, ಕಾಮಗಾರಿಗಳು ನಡೆಯುತ್ತಿತ್ತು. ಕೋವಿದ್-19ದ ಲಾಕ್ಡೌನ್ನಿಂದಾಗಿ ಕಾಮಗಾರಿಗಳು ಸ್ಥಗಿತವಾಗಿತ್ತು. ನೆರೆಯಿಂದಾಗಿ ಹಾನಿಗೀಡಾದ ಅಗತ್ಯ ಕಾಮಗಾರಿಗಳಿಗೆ ಸರಕಾರದಿಂದ ಅನುಮತಿ ಸಿಕ್ಕಿದ್ದು ಪ್ರಗತಿಯಲ್ಲಿದೆ.
ಚಾರ್ಮಾಡಿ ಗ್ರಾಮದ ಅನಾರು, ಮುಗುಳಿತ್ತಡ್ಕ, ಬರಮೇಲುಗೆ ಎರಡು ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಸೇತುವೆ ದುರಸ್ತಿ, ತಡೆಗೋಡೆ ನಿರ್ಮಾಣ ಹಾಗೂ ಕಾಂಕ್ರಿಟೀಕರಣದ 1.60 ಕೋಟಿ ರೂ. ಕಾಮಗಾರಿ, ತೋಟತ್ತಾಡಿ ಗ್ರಾಮದ ಶಿಶು ಮಂದಿರದಿಂದ ಪಾದೇಬೈಲಿಗೆ ಸಂಪರ್ಕ ಕಲ್ಪಿಸುವ 50 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.
ಇದೇ ಸಂದರ್ಭ ಕ್ಯಾನ್ಸರ್ನಿಂದ ಬಳಲುತ್ತಿರುವ ಕಕ್ಕಿಂಜೆಯ ಪದ್ಮನಾಭ ಅವರ ಮನೆಗೆ ತೆರಳಿ ಧನ ಸಹಾಯ ನೀಡಿದರು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ದಾನಿಗಳ ಸಹಕಾರದಲ್ಲಿ ಚಾರ್ಮಾಡಿಯ ಪಾಂಡಿಕಲ್ಲು ಎಂಬಲ್ಲಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು ಅಲ್ಲಿಗೂ ತೆರಳಿದ ಶಾಸಕರು ಊರ ಯುವಕರ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಧನ ಸಹಾಯ ನೀಡಿದರು.
ಈ ಸಂದರ್ಭ ತಾ.ಪಂ.ಸದಸ್ಯ ಕೊರಗಪ್ಪ ಗೌಡ, ಚಾರ್ಮಾಡಿ ಗ್ರಾ.ಪಂ.ಅಧ್ಯಕ್ಷೆ ಶೈಲಜಾ, ಗ್ರಾ.ಪಂ.ಸದಸ್ಯರು, ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷ ದಿನೇಶ್ ಹೊಸಮಠ, ಮುಂಡಾಜೆ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್, ಅಶೋಕ್ ಜೈನ್, ಕಮಲಾಕ್ಷ ಪೂಜಾರಿ, ನಿತಿನ್ ರಾವ್, ದಿವಿನ್, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.