ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಆಶಯ “Be VOCAL about Local” ದಂತೆ ಇಂದಿನಿಂದ ಬೆಳ್ತಂಗಡಿಯ ಪುಣ್ಯ ಭೂಮಿಯಿಂದ ಆರಂಭವಾಗಿ ಬೆಳೆದ ವಿವಿಧ ಸಂಸ್ಥೆಗಳ ಹಾಗೂ ಬ್ರಾಂಡ್ ಗಳ ಪರಿಚಯ ಮಾಡುವ ಸಣ್ಣ ಪ್ರಯತ್ನ. ಮುಂದಿನ ಬಾರಿ ನೀವು ಏನನ್ನಾದರೂ ಕೊಂಡುಕೊಳ್ಳುವಾಗ ಸಿರಿ ಸಂಸ್ಥೆಗಳ ವಸ್ತುವನ್ನು ಕೇಳಿ ತೆಗೆದುಕೊಳ್ಳಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಮ್ಮ ಕ್ಷೇತ್ರದ ಜನತೆಯ ಬಳಿ ಮನವಿ ಮಾಡಿಕೊಂಡರು.
ಬೆಳ್ತಂಗಡಿ ತಾಲೂಕಿನ ಸ್ಥಾಪನೆಯಾಗಿರುವ ಬ್ರಾಂಡ್ ಗಳ ಬಗ್ಗೆ ಪರಿಚಯಿಸುವ ಸರಣಿ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಶಾಸಕ ಹರೀಶ್ ಪೂಂಜ, ಇಂದು ಪರಿಚಯಿಸಿದ ಬ್ರಾಂಡ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಂಗವಾದ ‘ಸಿರಿ’. ಗ್ರಾಮೀಣ ಮಹಿಳೆಯರು ಸೇರಿ ಬೆಳೆಸಿದ ಉತ್ಪನ್ನಗಳ ಸಂಸ್ಥೆ “ಸಿರಿ”. ಈ ಸಿರಿ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು. ಸಿದ್ದ ಉಡುಪುಗಳು, ಅಗರಬತ್ತಿ, ರಾಸಾಯನಿಕ ವಸ್ತುಗಳು, ರೆಕ್ಸಿನ್ ಉತ್ಪನ್ನಗಳು, ಆಹಾರೋತ್ಪನ್ನ ಘಟಕ, ಹಾಳೆ ತಟ್ಟೆಗಳ ಉತ್ಪಾದನಾ ಘಟಕಗಳು ಸೇರಿದಂತೆ ಒಟ್ಟು 43 ಘಟಕಗಳು ವಿವಿಧ ವಸ್ತುಗಳನ್ನು ಉತ್ಪಾದಿಸುತ್ತಿವೆ.
ಮುಂದಿನ ಬಾರಿ ನೀವು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಳ್ಳುವಾಗ ನಮ್ಮ ಊರಿನ ಬ್ರಾಂಡ್ “ಸಿರಿ”ಯ ಉತ್ಪನ್ನಗಳನ್ನು ಕೊಂಡುಕೊಳ್ಳಿ ಮತ್ತದಕ್ಕೆ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿ ಎಂದು ಶಾಸಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.