ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಡಿಕೆಶಿ ಆಪ್ತ ಮಿಥುನ್ ರೈ ಕೊರೋನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಜುಲೈ 17ರಂದು ತನಗೆ ಕೊರೊನಾ ಪಾಸಿಟಿವ್ ಆಗಿರುವುದಾಗಿ ಮಿಥುನ್ ರೈ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಮಿಥುನ್ ರೈ ಅವರ ಮಾಹಿತಿಯ ಪ್ರಕಾರ ಇಂದಿಗೆ 14 ದಿನ ಕಳೆಯುತ್ತದೆ. ಆದರೆ ಸರ್ಕಾರದ ನಿಯಮದ ಪ್ರಕಾರ ಪಾಸಿಟಿವ್ ವ್ಯಕ್ತಿ 17 ದಿನ ಐಸೊಲೇಷನ್ ನಲ್ಲಿ ಇರಬೇಕಾದ್ದು ಕಡ್ಡಾಯ.
ಆದರೆ ಹೀಗಿದ್ದೂ ಮಿಥುನ್ ರೈ ಅವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಪೂರ್ತಿ ದಿನ ಕಳೆದಿರುವುದಕ್ಕೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ಕ್ವಾರಂಟೈನ್ ನಲ್ಲಿರಬೇಕಾದ ಮಿಥುನ್ ರೈ ಈ ರೀತಿ ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಸರಿಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಿಥುನ್ ರೈ ಅವರ ಕ್ವಾರಂಟೈನ್ ಕುರಿತು ಚರ್ಚೆ ಶುರುವಾಗಿದೆ.