ಕಡಬ; ಕಾಣಿಯೂರಿನಲ್ಲಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕಯಿಂದ ನಾಪತ್ತೆಯಾಗಿದ್ದ ಸುರೇಶ್ (40) ಅವರ ಶವ ಶುಕ್ರವಾರ ಸಂಜೆ ಕುಮಾರಾಧಾರ ನದಿಯಲ್ಲಿ ಪತ್ತೆಯಾಗಿದೆ.
ಸುರೇಶ್ ಅವರು ಜು.15ರ ರಾತ್ರಿ ಮನೆಯಿಂದ ಹೊರಟು ಹೋದವರು ನಾಪತ್ತೆಯಾಗಿದ್ದರು. ಕುಡಿತ ಚಟ ಹೊಂದಿದ್ದ ಅವರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅವರು ನಾಪತ್ತೆಯಾಗಿದ್ದ ಬಗ್ಗೆ ಅವರ ಸಹೋದರ ಚಿದಾನಂದ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು.ಅದರಂತೆ ಪ್ರಕರಣ ದಾಖಲಾಗಿತ್ತು
ಮೊನ್ನೆಯಿಂದ ನಾಪತ್ತೆಯಾದ ಸುರೇಶ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಅವರ ಶರ್ಟ್ ಹಾಗೂ ಛತ್ರಿ ಕಾಪಜಾಲು ಹೊಳೆ ಬದಿಯಲ್ಲಿ ಪತ್ತೆಯಾಗಿತ್ತು. ಅವರು ಹೊಳೆಗೆ ಬಿದ್ದು ನೆರೆ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎನ್ನುವ ಶಂಕೆಯಲ್ಲಿ ಅಗ್ನಿ ಶಾಮಕದಳದವರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.
ಬುಧವಾರ ಕೂಡಾ ಶೋಧ ಕಾರ್ಯ ನಡೆಸಲಾಗಿತ್ತು. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತು ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಕೈ ಬಿಡಲಾಗಿತ್ತು. ನಿನ್ನೆ ಸಂಜೆ ಅವರ ಮೃತದೇಹ ಪತ್ತೆಯಾಗಿದೆ.
ಶುಕ್ರವಾರ ಇಳಿ ಸಂಜೆ ಹೊತ್ತಿಗೆ ಕಾಪೆಜಾಲು ಹೊಳೆ ಕುಮಾರಧಾರ ನದಿಗೆ ಸೇರುವ ಜಾಗದಲ್ಲಿ ಪೊದೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯರು ಶವವನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶವವನ್ನು ಮೇಲೆತ್ತಲಾಗಿದೆ.ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣಾ ಎಸ್ಪಿ ಸಂತೋಷ್ ಹಾಗೂ ಸಿಬ್ಬಂದಿ ಆಗಮಿಸಿ ಮಹಜರು ನಡೆಸಿದರು. ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಭೀರ, ಪಿಡಿಓ ನಾರಾಯಣ್, ಗ್ರಾಮ ಆಡಳಿತಾಧಿಕಾರಿ ಪುಷ್ಪರಾಜ್ ಸಹಿತ ಹಲವರು ಈ ಸಂದರ್ಭದಲ್ಲಿದ್ದರು.


