ಪುತ್ತೂರು; ಹೆಜ್ಜೇನು ದಾಳಿಯಿಂದ ಬಾಲಕಿ ಸಾವನ್ನಪ್ಪಿದ ಬಾಲಕಿಯ ಮೃತದೇಹವನ್ನು ಸಾಗಿಸುತ್ತಿದ್ದಾಗ ಆ್ಯಂಬುಲೆನ್ಸ್ ಅನ್ನು ಕಿಡಿಗೇಡಿಗಳು ಅಡ್ಡಗಟ್ಟಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಘಟನೆ ಪೆರ್ನೆ-ಕಡಂಬು ರಸ್ತೆಯ ಮಧ್ಯೆ ನಡೆದಿದೆ.
ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಅವರ ಪುತ್ರಿ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಇಶಾ (7) ಶನಿವಾರ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಶಾ ಅವರ ಮೃತದೇಹವನ್ನು ಮಂಗಳೂರು ಆಸ್ಪತ್ರೆಯಿಂದ ಅವರ ಮನೆಗೆ ಕರೆ ತರಲಾಗುತ್ತಿದ್ದ ವೇಳೆ ನಿಂತಿದ್ದ ಕಿಡಿಗೇಡಿಗಳು ಆ್ಯಂಬುಲೆನ್ಸ್ ತಡೆದು ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ. ಮಗುವಿನ ಮೃತದೇಹವನ್ನು ಸಾಗಿಸುತ್ತಿರುವುದಾಗಿ ತಿಳಿಸಿ, ಅಡ್ಡಿ ಪಡಿಸದಂತೆ ವಿನಂತಿಸಿದರೂ ಕಿಡಿಗೇಡಿಗಳ ತಂಡ ಅನುಚಿತವಾಗಿ ವರ್ತಿಸಿದೆ. ಮದ್ಯಪಾನ ಮಾಡಿದ್ದ ಯುವಕರ ತಂಡ ಈ ಕೃತ್ಯ ಎಸಗಿದೆ. ಘಟನೆಯ ಕುರಿತು ಆ್ಯಂಬುಲೆನ್ಸ್ ಚಾಲಕ ಅವಿನಾಶ್ ಹಾರಾಡಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ಅನಂತರ ಕಿಡಿಗೇಡಿಗಳು ತೆರಳಿದ್ದ ಕಾರಿನ ನಂಬರ್ಆಧಾರದಲ್ಲಿ ಯುವಕರು ಯಾರು ಎಂಬುದನ್ನು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಗಜೇಂದ್ರ ಎಂಬಾತನ ಮನೆಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿ ದ್ದಾರೆ. ಆ ಮನೆಯಲ್ಲಿ ಇಲ್ಲದ ಕಾರಣ ಪೊಲೀಸ್ ಠಾಣೆಗೆ ಬರುವಂತೆ ಆತನ ಮನೆಯವರಿಗೆ ಸೂಚನೆ ನೀಡಿದ್ದಾರೆ.


