ಸುಳ್ಯ; ಕೊರಗಜ್ಜ ಅಂದ್ರೆ ಕರಾವಳಿಗರಿಗೆ ಅತ್ಯಂತ ಅಚ್ಚುಮೆಚ್ಚಿನ ದೈವ. ಕರಾವಳಿಗರಿಗಷ್ಟೇ ಒಂದು ಕಾಲದಲ್ಲಿ ಪರಿಚಯವಿದ್ದ ಕೊರಗಜ್ಜ ಇದೀಗ ತನ್ನ ಪವಾಡ ಹಾಗೂ ಕಾರ್ಣಿಕದ ಮೂಲಕ ದೇಶದೆಲ್ಲೆಡೆ ಭಕ್ತರನ್ನು ಸೆಳೆಯುತ್ತಿದ್ದಾನೆ. ಅದರಲ್ಲೂ ಆತನ ಕಾರ್ಣಿಕ, ಪವಾಡ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತಹ ಅನೇಕ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ.
ಇದೀಗ ಅಂತಹದ್ದೇ ಘಟನೆಯೊಂದು ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆ ಎಂಬಲ್ಲಿ ನಡೆದಿದೆ. ವೀಳ್ಯದೆಲೆಯು ಸಾಮಾನ್ಯವಾಗಿ ವಾರದಲ್ಲಿ ಬಾಡಿ ಹೋಗುತ್ತದೆ. ಅಂತಹದ್ದರಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇರಿಸಿರುವ ಈ ವೀಳ್ಯದೆಲೆಯು ಹಸಿರಾಗಿಯೇ ಇದ್ದು ಈಗ ಬೇರು ಮೂಡಿರುವುದು ವಿಶೇಷವಾಗಿದೆ.
ಮಾತ್ರಮಜಲಿನ ಶೀನಪ್ಪ ಎಂಬವರ ಮನೆಯ ವಠಾರದಲ್ಲಿ ಕೊರಗಜ್ಜ ದೈವದ ಕಟ್ಟೆ ಇದೆ. ಇಲ್ಲಿ ಪ್ರತೀ ತಿಂಗಳು ಸಂಕ್ರಮಣದ ದಿನ ಆರಾಧನೆಯಾಗುತ್ತದೆ. ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಇದ್ದಾಗ ಸಮೀಪದವರು ಕೊರಗಜ್ಜ ದೈವಕ್ಕೆ ಹರಿಕೆ ಹೇಳಿದ್ದರು. ಈ ಸಂದರ್ಭ ಕೊರಗಜ್ಜನಿಗೆ ಪ್ರಿಯವಾದ ವೀಳ್ಯದೆಲೆ , ಅಡಿಕೆಯನ್ನು ಕಟ್ಟೆಯ ಮೇಲೆ ಇರಿಸಿ ಪ್ರಾರ್ಥನೆ ಮಾಡಿದ್ದರು.
ಕೆಲವು ದಿನಗಳವರೆಗೂ ಹಸಿರಾಗಿಯೇ ಇದ್ದ ವೀಳ್ಯದೆಲೆ ನಂತರ ಬೇರು ಬರಲು ಆರಂಭಿಸಿತು. ತಕ್ಷಣವೇ ಶೀನಪ್ಪ ಅವರು ದೈವಜ್ಞರ ಮೂಲಕವೂ ತಿಳಿದಾಗ ಸತ್ಯದ ಅರಿವಾಯಿತು.ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಈಗ ಹೂಕುಂಡದಲ್ಲಿ ಇರಿಸಿದ್ದಾರೆ. ಈಗಲೂ ವೀಳ್ಯದೆಲೆ ಹಸಿರಾಗಿಯೇ ಇದೆ. ಕಳೆದ ತಿಂಗಳು ಈ ವೀಳ್ಯದೆಲೆಯನ್ನು ಕಟ್ಟೆಯ ಮೇಲೆ ಇರಿಸಲಾಗಿತ್ತು ಶೀನಪ್ಪ ಅವರು ಹೇಳಿದ್ದಾರೆ. ಇದೀಗ ಪವಾಡ ನೋಡಲೆಂದು ಅಜ್ಜನ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.