ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿರುವ ರಾಷ್ಟ್ರೀಯ ಹೆದ್ದಾರಿ 169ಎ ಇದರ ನೆಮ್ಮಾರ್ ಬ್ರಿಡ್ಜ್ ನಿಂದ ತನಿಕೋಡು ಚೆಕ್ ಪೋಸ್ಟ್ ನಡುವಿನ 8.8 ಕಿ.ಮೀ. ಉದ್ದದ ಭಾಗಕ್ಕೆ ಅಗಲೀಕರಣ ಸಹಿತ ಅಭಿವೃದ್ಧಿಗೋಳಿಸಲು ಕೇಂದ್ರ ಸರ್ಕಾರ 94.1 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ. ಪ್ರಸ್ತಾವಿತ ನೆಮ್ಮಾರ್ ಬ್ರಿಡ್ಜ್ ನಿಂದ ತನಿಕೋಡು ಚೆಕ್ ಪೋಸ್ಟ್ ನಡುವಿನ 8.8 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಭಾಗವನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡಲಾಗಿದೆ.
ಸಮಗ್ರ ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಈ ಬಹುಮುಖ್ಯ ಭಾಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ಷೇತ್ರದ ವಿನಂತಿಯನ್ನು ಮನ್ನಿಸಿ ರೂಪಾಯಿ 94.1 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮತ್ತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಹೃತ್ಪೂರ್ವಕ ಕೃತ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಈ ಅನುದಾನ ಮಂಜೂರಾತಿ ಆದೇಶದಲ್ಲಿ ತಿಳಿಸಿರುವಂತೆ ಪ್ರಸ್ತಾವಿತ ಕಾಮಗಾರಿಯು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಜನತೆಯ ಉಪಯೋಗಕ್ಕೆ ಲಭ್ಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸದರಿ ಕಾಮಗಾರಿ ಶೀಘ್ರವಾಗಿ ಅಚ್ಚುಕಟ್ಟಾಗಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಕೈಗೊಳ್ಳಲು ಎಲ್ಲಾ ಕಾಳಜಿ ವಹಿಸಲಾಗುವುದು ಎಂದೂ ಶೋಭಾ ಕರಂದ್ಲಾಜೆ ಹೇಳಿದ್ದಾರೆ