ಪುತ್ತೂರು: ಈ ಬಾರಿಯ ಪುತ್ತೂರು ಜಾತ್ರೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಪೇಟೆ ಸವಾರಿ ವೇಳೆ ಮಹಾಲಿಂಗೇಶ್ವರ ದೇವರು ಮತ್ತು ವೆಂಕಟರಮಣ ದೇವರು ಮುಖಾಮುಖಿಯಾದ ಅಪರೂಪದ ಘಟನೆ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಉತ್ಸವದ ಬಳಿಕ ಶ್ರೀ ದೇವರ ಪೇಟೆ ಸವಾರಿಯು ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರು ಬೈಲ್ ಸವಾರಿಯೊಂದಿಗೆ ದೇವಾಲಯಕ್ಕೆ ಹಿಂದಿರುಗಿತು.
ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಕೋರ್ಟ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಯುಗಾದಿ ಹಬ್ಬದ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪಲ್ಲಕಿ ಉತ್ಸವದಲ್ಲಿ ಪೇಟೆ ಸವಾರಿಯಲ್ಲಿದ್ದ ವೆಂಕಟರಮಣ ದೇವರು ಮುಖಾಮುಖಿಯಾದರು.
ಈ ಅಪರೂಪದ ಕ್ಷಣದಿಂದ ನೆರೆದಿದ್ದ ಭಕ್ತರು ಪುಳಕಿತರಾದರು. ಆರು ವರ್ಷದ ಹಿಂದೆ ಪುತ್ತೂರು ಜಾತ್ರೆ ಸಂದರ್ಭ ಹನುಮ ಜಯಂತಿ ಉತ್ಸವ ನಡೆದಿದ್ದ ವೇಳೆ ಉಭಯ ದೇವರುಗಳ ಮುಖಾಮುಖಿ ನಡೆದಿತ್ತು ಎಂದು ಭಕ್ತರು ಆ ದಿನಗಳನ್ನು ಸ್ಮರಿಸಿದ್ದಾರೆ.