ಕಡಬ;ಮಳೆಗಾಗಿ ಪ್ರಾರ್ಥಿಸಿ ಸ್ಥಳೀಯರು ದೇವರಿಗೆ ಪೂಜೆ ಸಲ್ಲಿಸುತ್ತಿರುವಾಗ ಅಗರಬತ್ತಿಯ ಹೊಗೆ ವಿರುದ್ಧ ದಿಕ್ಕಿನಲ್ಲಿ ಹೊರ ಹೊಮ್ಮಿ ಅಚ್ಚರಿ ಮೂಡಿಸಿದ ಘಟನೆ ಕಡಬ ತಾಲೂಕಿನ ಕೊಯಿಲಾ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇಗುಲದಲ್ಲಿ ನಡೆದಿದೆ.
ಗ್ರಾಮದ ಜನ ವರುಣದೇವರ ಕೃಪೆಗಾಗಿ ಪ್ರಾರ್ಥಿಸಿ ಏಪ್ರಿಲ್ 8 ರಂದು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ದೇವರಿಗೆ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದ್ದರು. ದೇವರ ಪೂಜೆಗಾಗಿ ಗರ್ಭಗುಡಿಯ ಬಾಗಿಲ ಬಳಿ ಒಂದು ಅಗರಬತ್ತಿ ಹಚ್ಚಲಾಗಿತ್ತು. ದೇವರಿಗಾಗಿ ಹಚ್ಚಿದ ಅಗರಬತ್ತಿಯಿಂದ ಹೊರಹೊಮ್ಮಿದ ಹೊಗೆ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಭಕ್ತರಲ್ಲಿ ಕೌತುಕ ಮೂಡಿಸಿದೆ.
ದೇವರ ವಿಗ್ರಹವಿರುವ ಗರ್ಭಗುಡಿಯ ಮೂರು ಪಾರ್ಶ್ವದಲ್ಲೂ ಗೋಡೆಯಿದ್ದು, ಗೋಡೆಯಲ್ಲಿ ಯಾವುದೇ ರೀತಿಯ ಗಾಳಿ ಹರಿದಾಡುವ ವ್ಯವಸ್ಥೆಯಿಲ್ಲ. ಕೇವಲ ಬಾಗಿಲಿನ ಮೂಲಕವೇ ಗಾಳಿ ಗರ್ಭಗುಡಿಯ ಒಳಗಡೆ ಪ್ರವೇಶಿಸಲು ಅವಕಾಶವಿದೆ. ಈ ಕಾರಣಕ್ಕಾಗಿ ದೇವರ ಬಾಗಿಲ ಬಳಿ ಹಚ್ಚಿದ ಅಗರಬತ್ತಿ ಹೊಗೆ ಗಾಳಿಯ ಮೂಲಕ ಗರ್ಭಗುಡಿಯ ಒಳಗೆ ಹೋಗಬೇಕಾಗಿತ್ತು.
ಆದರೆ ಇಲ್ಲಿ ಹಚ್ಚಿದ ಅಗರಬತ್ತಿಯ ಹೊಗೆ ಮಾತ್ರ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿತ್ತು. ಈ ರೀತಿ ಹೊಗೆ ಹೊರಗಡೆ ಬರಲು ಕಾರಣವೇನು ಎನ್ನುವುದನ್ನು ಯೋಚಿಸಿದ ಭಕ್ತರಿಗೆ ಇದು ದೇವರ ಇಚ್ಛೆ ಮತ್ತು ದೇವರ ಅಭಯ ಎನ್ನುವುದು ತಿಳಿದು ಬಂದಿತ್ತು. ಈ ಹಿಂದೆಯೂ ಇಲ್ಲಿ ಹಚ್ಚಿದ ಅಗರಬತ್ತಿಯಲ್ಲಿ ಹೊರಹೊಮ್ಮಿದ ಹೊಗೆಯಲ್ಲಿ ಓಂಕಾರಾಕ್ಷರವೂ ಕಂಡು ಬಂದಿತ್ತು ಎಂದು ಭಕ್ತರು ಹೇಳಿದ್ದಾರೆ.