ಬೆಂಗಳೂರು: ಇಂದಿನಿಂದ ಆರಂಭವಾಗಿರುವ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಿರುವ ಸುನೀಲ್ ಕುಮಾರ್, ಸರ್ವಜನಾಂಗದ ಶಾಂತಿಯ ನಾಡು ಕರ್ನಾಟಕಕ್ಕೆ ಶ್ರೀ ರಾಹುಲ್ ಗಾಂಧಿಯವರಿಗೆ ಸ್ವಾಗತ, ಕರ್ನಾಟಕದಲ್ಲಿ ನಿಮ್ಮ ಭಾರತ್ ತೋಡೋ ಯಾತ್ರೆ ಆರಂಭಿಸುವ ಮುನ್ನ ಕನ್ನಡಿಗರ ಕೆಲವು ಪ್ರಶ್ನೆಗಳಿಗೆ ದಯವಿಟ್ಟು ಉತ್ತರ ನೀಡಿ ಎಂದು ಕಾಲೆಳೆದಿದ್ದಾರೆ.
ನೀವು ಅಮೇಥಿಗೂ ಭೇಟಿ ನೀಡುತ್ತಿರಾ? ಅಥವಾ ಅಲ್ಲಿ ಹೀನಾಯವಾಗಿ ಸೋತದ್ದಕ್ಕೆ ತಲೆಕೆಡಿಸಿಕೊಂಡಿದ್ದಿರಾ? ಎಂದು ಕೇಳಿರುವ ಸುನೀಲ್ ಕುಮಾರ್, ನಿಮ್ಮ ಕ್ಷೇತ್ರ ವೈಯನಾಡ್ ಭೇಟಿ ಹೇಗಿತ್ತು? ನೀವು ಅಲ್ಲಿಗೆ ಕೇವಲ ಭೇಟಿ ನೀಡುವ ಜನಪ್ರತಿನಿಧಿಯಾಗಿದ್ದಿರಿ ಎಂದು ಹೇಳಿದ್ದಾರೆ.
ಕೇರಳದಲ್ಲಿ ರೌಲ್ ವಿನ್ಸಿಯಾಗಿ, ಕರ್ನಾಟಕದಲ್ಲಿ ಜನಿವಾರಧಾರಿಯಾಗಿ ವಿವಿಧ ಧರ್ಮ ಹಾಗೂ ಸಮುದಾಯಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಹೇಗೆ ಅನಿಸುತ್ತದೆ? ಎಂದು ಪ್ರಶ್ನೆ ಮಾಡಿರುವ ಸಚಿವರು, ಪಿಎಫ್ಐ ಸಂಘಟನೆಯ ಮುಷ್ಕರದ ಸಮಯದಲ್ಲಿಯೇ ನಿಮಗೆ ಯಾತ್ರೆಗೆ ಹೇಗೆ ಬಿಡುವು ದೊರೆಯಿತು? ನೀವು ಅವರ ಅನುಮತಿ ಪಡೆದಿದ್ದಿರೋ? ಅಥವಾ ಅವರು ಪ್ರತಿಭಟಿಸಲು ನಿಮ್ಮ ಅನುಮತಿ ಪಡೆದಿದ್ದರೋ? ಎಂದು ವ್ಯಂಗ್ಯ ಮಾಡಿದ್ದಾರೆ.