ಸುಳ್ಯ : ರಸ್ತೆ ಪರಿಶೀಲನೆಗೆಂದು ಹೋಗುತ್ತಿದ್ದ ವೇಳೆ ಏರು ಪ್ರದೇಶದಲ್ಲಿ ಸಚಿವ ಎಸ್. ಅಂಗಾರ ಹೋಗುತ್ತಿದ್ದ ಜೀಪು ಮುಂದೆ ಚಲಿಸದೆ ಬಾಕಿಯಾಗಿದ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಕೂಟೇಲು ಎಂಬಲ್ಲಿ ಶನಿವಾರ ನಡೆದಿದೆ.
ಪರ್ಯಾಯ ಮಾರ್ಗವಿಲ್ಲದ ಕಾರಣ ಸಚಿವರು ಜೀಪಿನಿಂದ ಇಳಿದು ಏರು ರಸ್ತೆಯಲ್ಲಿ ನಡೆಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಚಿವರ ಬೆಂಬಲಿಗರು ಜೀಪನ್ನು ತಳ್ಳಿ ಮುಂದಕ್ಕೆ ಚಲಿಸುವಂತೆ ಮಾಡಿದ್ದಾರೆ.

ಕೂಟೇಲು ಅರಂಬೂರು ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸುವಂತೆ ಆ ಭಾಗದ ನಾಗರೀಕರು ಮನವಿಯನ್ನು ಸಲ್ಲಿಸಿದ್ದು,ಗಡಿಪಣೆಯಿಂದ ಮುಂದೆ ಕೂಟೇಲುನಲ್ಲಿರುವ ಸೇತುವೆಯ ಎರಡು ಬದಿಯ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಕುಸಿಯುವ ಹಂತದಲ್ಲಿದೆ. ತಡೆಗೋಡೆ ನಿರ್ಮಿಸುವ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದ್ದು, ಸಚಿವರು ಸೇತುವೆ ಬದಿ ಕುಸಿತಗೊಂಡಿರುವ ಪ್ರದೇಶವನ್ನು ವೀಕ್ಷಿಸಿದ್ದಾರೆ.
ವಿಪರೀತ ಮಳೆಯ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ಕಷ್ಟವಾದರೂ ವಾಸ್ತವತೆಯನ್ನು ಸಚಿವರು ಕಣ್ಣಾರೆ ಕಾಣುವಂತಾಗಿದೆ. ಹಳ್ಳಿ ಬದುಕಿನ ನೋವು ನಲಿವು, ಮೂಲ ಸೌಕರ್ಯದ ಅಗತ್ಯತೆ ಬಗ್ಗೆ ಕಾಳಜಿ ಇರುವ ಸಚಿವರು ಮುಂದಿನ ದಿನಗಳಲ್ಲಿ ಇಂತಹ ಹಲವು ರಸ್ತೆಗಳಿಗೆ ಹೋಸ ಕಾಯಕಲ್ಪ ನೀಡುತ್ತಾರೆ ಎಂಬುದು ಮತದಾರನ ನಿರೀಕ್ಷೆಯಾಗಿದೆ.


