ಮಂಗಳೂರು: ಕಾಂತಾರ ಸಿನಿಮಾವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಳೆ ವಿಭಿನ್ನವಾಗಿ ವೀಕ್ಷಿಸಲಿದ್ದಾರೆ.
ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯಿಂದ ಮೂಡಿಬಂದ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ ದೈವದ ಸೇವೆ ಮಾಡುವ ಸಮಾಜ ಮತ್ತು ವ್ಯಕ್ತಿಗಳೊಂದಿಗೆ ಸಿನಿಮಾ ವೀಕ್ಷಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಾನು ಕುಂದಾಪುರ ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ಸೇವೆ ಮಾಡುವವರ ಜೊತೆಗೆ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಸಿನಿಮಾ ಮಂದಿರದಲ್ಲಿ ನೂರಕ್ಕೂ ಅಧಿಕ ಟಿಕೆಟ್ ಗಳನ್ನು ಸಚಿವರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದು, ಖುದ್ದು ಸಚಿವರೇ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.


