ಕುಂದಾಪುರ: ತಮ್ಮ ಆಡಳಿತಾವಧಿಯಲ್ಲಿ ಇಂತಹ ನೂರಾರು ಸವಾಲು ಹಾಗೂ ಬೆದರಿಕೆಗಳನ್ನು ಪ್ರಧಾನಿ ಮೋದಿಯವರು ಎದುರಿಸಿದ್ದಾರೆ. ಉದಯಪುರ ಹತ್ಯೆಕೋರರು ಪ್ರಧಾನಿಯವರಿಗೆ ಬೆದರಿಕೆಯೊಡ್ಡಿದ್ದಾರೆ. ಅವರ ಬೆದರಿಕೆಗೆ ಹೆದರುವವರು ನಾವಲ್ಲ. ಅವರಿಂದ ಪ್ರಧಾನಿಯವರ ಕಣ್ಣು ಹಾಗೂ ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾವ ಧರ್ಮದಲ್ಲಿಯೂ ಹೇಳಿಲ್ಲ. ಅಧರ್ಮಿಗಳು, ಮೂಢರು, ಮುಟ್ಟಾಳರು ಇಂತಹ ಕೃತ್ಯಗಳನ್ನು ಎದುರಿಸುತ್ತಿದ್ದಾರೆ. ಇದು ಆ ವ್ಯಕ್ತಿಗಳ ವಿನಾಶ. ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಈ ವಿಚಾರದಲ್ಲಿ ಕಾನೂನಿನ ಕ್ರಮವನ್ನು ಸಂಪೂರ್ಣವಾಗಿ ವಹಿಸಿ, ಇಂತಹ ಕೌರ್ಯ ಮರುಕಳಿಸದಂತೆ ಸಂಬಂಧಪಟ್ಟ ರಾಜ್ಯ ಸರಕಾರ ಮಾಡಬೇಕು. ಆ ಮೂಲಕ ಪ್ರಜೆಗಳಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದರು.
ಭಾರತೀಯರು ಶಾಂತಿಯುತವಾಗಿ ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ಬಾಳುತ್ತಿದ್ದೇವೆ. ನೂರಾರು ಸವಾಲನ್ನು ಎದುರಿಸಿರುವ ದೇಶಕ್ಕೆ ಅಪಾರವಾದ ಶಕ್ತಿ ಇದೆ. ಇದ್ಯಾವುದಕ್ಕೂ ನಾವು ಜಗ್ಗಲ್ಲ. ಅಮಾಯಕನ ಶಿರಚ್ಛೇದ ಮಾಡುವ ಮೂಲಕ ಗೊಡ್ಡು ಬೆದರಿಕೆ ನಮಗೆ ಹಾಕಿರುವುದಲ್ಲ. ಕೃತ್ಯ ಎಸಗಿದ ವ್ಯಕ್ತಿಗಳ ಮನಸ್ಥಿತಿಯನ್ನು ಈ ಕೌರ್ಯದ ಮೂಲಕ ತೋರಿಸಿದ್ದಾರೆ ಎಂದರು