ನವದೆಹಲಿ, ಜೂನ್ 2: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಜೆಸ್ಸಿಕಾ ಲಾಲ್ ಹತ್ಯೆಯ ಅಪರಾಧಿ ಮನುಶರ್ಮ ನನ್ನು ಅವಧಿಗೂ ಮುನ್ನವೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮನುಶರ್ಮ ಸೇರಿದಂತೆ 18 ಮಂದಿಯನ್ನು ಸನ್ನಡತೆ ಆಧಾರದ ಮೇಲೆ ತಿಹಾರ್ ಜೈಲಿನಿಂದ ಇಂದು ಹೊರಕ್ಕೆ ಕಳುಹಿಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸಮ್ಮತಿಸಿದ್ದಾರೆ.
ಹರಿಯಾಣದ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮ ಪುತ್ರ ಮನು ಶರ್ಮ, 1999ರ ಏಪ್ರಿಲ್ 30ರಂದು ನವದೆಹಲಿಯಲ್ಲಿ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ಮಾಡೆಲ್ ಜೆಸ್ಸಿಕಾ ಲಾಲ್ ತನಗೆ ಕುಡಿಯಲು ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದ. ಈ ಕೊಲೆ, ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಘಟನೆ ನಡೆದ ಏಳು ವರ್ಷಗಳ ನಂತರ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಗೆ ಶಿಕ್ಷೆಯಾಗಿತ್ತು.
ಜೀವಾವಧಿ ಶಿಕ್ಷೆ ಪೂರ್ಣಗೊಳ್ಳುವುದಕ್ಕೂ 3 ವರ್ಷ ಮೊದಲೇ ಮನು ಶರ್ಮಾ ಬಿಡುಗಡೆಯಾಗಿದೆ.