ಸಕಲೇಶಪುರ: ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ವಿಶ್ರಾಂತಿ ಪಡೆಯಲು ಹಾಗೂ ರಾತ್ರಿ ವಾಸ್ತವ್ಯ ಮಾಡಲು ಅವಕಾಶ ಕಲ್ಪಿಸುವ ಮೂಲಕ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ ತಾಲೂಕಿನ ದೋಣಿಗಾಲ್ನ ಮಂಜರಬಾದ್ ದರ್ಗಾ ಗಮನ ಸೆಳೆದಿದೆ. ಕಳೆದ ಮೂರು ವರ್ಷಗಳಿಂದ ದರ್ಗಾ ಈ ವ್ಯವಸ್ಥೆಯನ್ನು ಮಾಡುತ್ತಿದೆ.
ಶಿವರಾತ್ರಿ ಆಚರಣೆಗೆ ಧರ್ಮಸ್ಥಳಕ್ಕೆ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಶಿರಾಡಿ ಘಾಟ್ ಮಾರ್ಗವಾಗಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. ‘ಅಡುಗೆ ಕೋಣೆ, ಶೌಚಾಲಯ, ಸ್ನಾನಕ್ಕೆ ದರ್ಗಾದ ಸಮುದಾಯ ಭವನವನ್ನು ಪಾದಯಾತ್ರಿಗಳು ಬಳಸಿಕೊಳ್ಳಬಹುದು’ ಎಂದು ದರ್ಗಾ ಆಡಳಿತ ಮಂಡಳಿ ಫಲಕ ಹಾಕಿದೆ. ಆದರೆ, ಇದುವರೆಗೂ ಯಾರೂ ಭವನದ ಸೌಲಭ್ಯವನ್ನು ಬಳಸಿಕೊಂಡಿಲ್ಲ.
‘ಶಿವನ ಭಕ್ತರಿಗೆ ಸೌಲಭ್ಯ ಕಲ್ಪಿಸಲೆಂದೇ ಭಾನುವಾರ ಮತ್ತು ಸೋಮವಾರ ಸಮುದಾಯ ಭವನವನ್ನು ಬಾಡಿಗೆ ನೀಡಿರಲಿಲ್ಲ. ಆದರೆ ಯಾರೂ ವಾಸ್ತವ್ಯ ಮಾಡದ ಕಾರಣ ಭಾನುವಾರ ಕಾರ್ಯಕ್ರಮವೊಂದಕ್ಕೆ ಬಾಡಿಗೆಗೆ ನೀಡಲಾಗಿತ್ತು. ಈ ಬಾರಿ ಭಕ್ತರು ಹಳ್ಳಿಗಳಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ನೂರಾರು ಭಕ್ತರಿಗೆ ತಂಪು ಪಾನೀಯ, ಹಣ್ಣುಗಳನ್ನು ವಿತರಿಸಲಾಗಿದೆ ’ ಎಂದು ದರ್ಗಾ ಆಡಳಿತ ಮಂಡಳಿ ಅಧ್ಯಕ್ಷ ಮಲ್ನಾಡ್ ಮೆಹಬೂಬ್ ತಿಳಿಸಿದರು.