ಅಮರಾವತಿ: ಮಂಗಳೂರು ಮೂಲದ ಲಾರಿಯೊಂದು ಆಂಧ್ರಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಉಳ್ಳಾಲ ಮೂಲದ ಓರ್ವ ಮೃತಪಟ್ಟರೆ, ಓರ್ವ ಗಂಭೀರ ಗಾಯಗೊಂಡಿದ್ದು, ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಮೃತ ವ್ಯಕ್ತಿಯನ್ನು ಹರೇಕಳ ಐಕು ನಿವಾಸಿ ಮಹಮ್ಮದ್ ರವೂಫ್ (22) ಎಂದು ಗುರುತಿಸಲಾಗಿದೆ. ಪಾವೂರು ಹರೇಕಳ ನಿವಾಸಿ ಶಕೀರ್ಗೆ ತೀವ್ರವಾದ ಗಾಯಗಳಾದರೆ, ನಾಟೆಕಲ್ನ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಾರಿ ಮೂಲಕ ಒಡಿಶಾದಿಂದ ಆಂಧ್ರಪ್ರದೇಶ ಮಾರ್ಗವಾಗಿ ಮಂಗಳೂರಿಗೆ ಒಂದು ಲೋಡ್ ಮೀನು ತರಲಾಗುತ್ತಿತ್ತು. ಲಾರಿ ಬುಧವಾರ ಬೆಳಿಗ್ಗೆ ಒಡಿಶಾದ ಮೀನುಗಾರಿಕಾ ಬಂದರಿನಿಂದ ಹೊರಟು ಸುಮಾರು 450 ಕಿ.ಮೀ ದೂರವನ್ನು ಕ್ರಮಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಲಾರಿ ಶುಕ್ರವಾರ ಮಂಗಳೂರು ನಗರ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿತ್ತು.
ಮೃತರ ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ನಗರಕ್ಕೆ ತರಲು ಯೋಜಿಸಲಾಗಿದೆ. ಶುಕ್ರವಾರ ಮೃತ ದೇಹ ಮಂಗಳೂರು ತಲುಪುವ ನಿರೀಕ್ಷೆಯಿದೆ.