ಮಂಗಳೂರು; ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ 450 ಗ್ರಾಂ ತೂಕದ ಗಾಂಜಾ ವಶ ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಉಳಾಯಿಬೆಟ್ಟಿವಿನ ಪ್ರದೀಪ್ ಪೂಜಾರಿ( 32), ಚಿತ್ರಾಪುರ ನಿವಾಸಿ ವಸಂತ (42) ಬಂಧಿತರು.
ದಿನಾಂಕ:03-01-2026 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ, 2ನೇ ಕ್ರಾಸ್ ನ ಬೆನಕ ಎಂಬ ಹೆಸರಿನ ಮನೆಯ ಬಳಿ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಪ್ರದೀಪ್ ಪೂಜಾರಿ, ಎಂಬವರನ್ನು ಬಂಧಿಸಿದ್ದಾರೆ.ಈ ವೇಳೆ ಅವರ ಬಳಿ ಇದ್ದ ಸುಮಾರು 21 ಕೆ.ಜಿ 450 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 10,72,500) ಮತ್ತು 3 ಮೊಬೈಲ್ ಪೋನ್ (ಅಂದಾಜು ಮೌಲ್ಯ ರೂ. 7,000) ನ್ನು ಹಾಗೂ ಗಾಂಜಾ ಸಾಗಿಸಲು ಬಳಸಿದ ಕೆ.ಎ. 04 ಎಂ.ಡಿ 2532 ನಂಬ್ರದ ಸ್ವೀಫ್ಟ್ ಕಾರನ್ನು (ಅಂದಾಜು ಮೌಲ್ಯ ರೂ. 3,00,000) ಹಾಗೂ ಗಾಂಜಾ ಸಂಗ್ರಹಿಸಿದ್ದ 3 ಲಗೇಜ್ ಬ್ಯಾಗ್ (ಅಂದಾಜು ಮೌಲ್ಯ ರೂ. 3,000), ಗಾಂಜಾ ಸೇವಿಸಲು ಬಳಸುವ ಸ್ಟ್ರೀಫ್ಸ್-2, ಹಾಗೂ ನಗದು ಹಣ 1,000 ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಗಾಂಜಾವನ್ನು ಹೊಸ ವರ್ಷಾಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ದಿನಾಂಕ:29-12-2025 ರಂದು ಓರಿಸ್ಸಾದಿಂದ ತಂದಿರುವುದಾಗಿ ತಿಳಿಸಿದ್ದು, ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇದ್ದುದರಿಂದ ಮಾರಾಟ ಮಾಡಲು ಸಾಧ್ಯವಾಗದೇ ಇದ್ದು ಅದನ್ನು ಕಾರಿನಲ್ಲಿಯೇ ಇಟ್ಟಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ.
ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಕಾರು ಮತ್ತು ಇತರೆ ವಸ್ತುಗಳ ಒಟ್ಟು ಮೌಲ್ಯ 13,86,500 ರೂಗಳಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(C), 20(b)(ii),(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಆರೋಪಿ ಪ್ರದೀಪ್ ಪೂಜಾರಿ ಬಜ್ಪೆಠಾಣೆಯಲ್ಲಿ ಎರಡು ಪ್ರಕರಣಗಳು, ಬರ್ಕೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬೆಳ್ತಂಗಡಿ ಠಾಣೆಯಲ್ಲಿ 1 ಪ್ರಕರಣ, ಧರ್ಮಸ್ಥಳ ಠಾಣೆಯಲ್ಲಿ 1 ಪ್ರಕರಣ, ಮುಲ್ಕಿ ಠಾಣೆಯಲ್ಲಿ 1, ಸುರತ್ಕಲ್ ಠಾಣೆಯಲ್ಲಿ 1 ಹಾಗೂ ಮಂಗಳೂರು ಉತ್ತರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀ ಶ್ರೀಕಾಂತ.ಕೆ. ರವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಶೇಖರ್, ಹೆಚ್.ಸಿ ಗಳಾದ ರೆಜಿ.ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪಿ.ಐ. ಶ್ರೀ ಪ್ರಮೋದ್ ಕುಮಾರ್, ಪಿ.ಎಸ್.ಐ ರಘುನಾಯ್ಕ್ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ರವರು ಭಾಗವಹಿಸಿರುತ್ತಾರೆ.


