ಮಂಗಳೂರು: ಉಳ್ಳಾಲ ಗ್ರಾಮದ ಮೊಗವೀರಪಟ್ಣದಿಂದ ಗಿಲ್ನೆಟ್ (ನಾಡದೋಣಿ) ಮೀನುಗಾರಿಕೆಗೆ ತೆರಳಿದ್ದ ವೇಳೆ ಕಾಣೆಯಾಗಿದ್ದ ತಣ್ಣೀರುಬಾವಿಯ ದಾವೂದ್ ಸಿದ್ದೀಕ್ (35) ಮೃತದೇಹ ಇಂದು ಮುಂಜಾನೆ ಮಂಜೇಶ್ವರದ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ದಾವೂದ್ ಸಿದ್ದೀಕ್, ಮುಹಮ್ಮದ್ ಫಯಾಝ್ ಹಸನ್, ಸಫ್ವಾನ್, ಜಾವೇದ್, ಜಾಫರ್, ಜಮಾಲ್ ಎಂಬವರು ಗುರುವಾರ ಪೂ.11:15ಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭ ದಾವೂದ್ ಸಿದ್ದೀಕ್ ಮೀನಿನ ಬಲೆಯನ್ನು ದೋಣಿಗೆ ಎಳೆಯುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಣ್ಮರೆಯಾಗಿದ್ದರು. ಉಳ್ಳಾಲ ಕಡಲ ತೀರದಿಂದ ಅರಬ್ಬೀ ಸಮುದ್ರದ ಸುಮಾರು 60 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿತ್ತು.
ದಾವೂದ್ ಸಿದ್ದೀಕ್ ಅವರ ಮೃತದೇಹವು ಇಂದು ಬೆಳಗ್ಗೆ ತಲಪಾಡಿ-ಮಂಜೇಶ್ವರ ಮಧ್ಯೆ ಕಡಲ ತೀರದಿಂದ 14 ನಾಟಿಕಲ್ ಮೈಲ್ ದೂರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯ ದೋಣಿಯವರು ಹಿಡಿದು ದಡಕ್ಕೆ ತಂದಿದ್ದಾರೆ.
ಕಡಲಲ್ಲಿ ಎಲ್ಲೇ ಜಲ ಅವಘಡ ಸಂಭವಿಸಿದರೂ ಪೊಲೀಸ್ ಇಲಾಖೆ ನೆರವು ಪಡೆಯುತ್ತಿದ್ದ ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸಕ್ರೀಯ ಸದಸ್ಯರೂ ಆಗಿದ್ದ ದಾವೂದ್ ಸಿದ್ದೀಕ್ ಕಳೆದ 15 ವರ್ಷದಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.