ಮಂಗಳೂರು: ಸಾರ್ವಜನಿಕ ದೂರಿನ ಹಿನ್ನೆಲೆ ಹಾಗೂ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಪೊಲೀಸರು ತಡೆಹಿಡಿದ ಘಟನೆಗಳನ್ನು ಪರಿಗಣಿಸಿ ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್ ಹಾಗೂ ಮನಪಾ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಮಾಂಸದ ಅಂಗಡಿಗಳನ್ನು ಪರಿಶೀಲಿಸಿದ್ದಾರೆ.
ಮಂಗಳೂರು ಮನಪ ವ್ಯಾಪ್ತಿಯ ಕಸಾಯಿಖಾನೆ ಹಾಗೂ ಮಟನ್ ಸ್ಟಾಲ್ ನಲ್ಲಿ ಬೀಫ್ ಬೆರಕೆ ಆರೋಪ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೊಂದಿಗೆ ಮನಪಾ ಅಧಿಕಾರಿಗಳು ಕೂಡ ಹಾಜರಿದ್ದರು.
ಉರ್ವಸ್ಟೋರ್, ಉರ್ವ ಮಾರ್ಕೆಟ್, ಕಸಾಯಿಖಾನೆ ಮುಂತಾದೆಡೆ ಮಾಂಸದ ಅಂಗಡಿಗಳನ್ನು ಪರಿಶೀಲಿಸಿ, ಅಕ್ರಮವಾಗಿ ಜಾನುವಾರು ಮಾಂಸ ಮಾರಾಟ ಕಂಡುಬಂದಲ್ಲಿ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ನೀಡಿದರು. ದಾಳಿ ವೇಳೆ ಕಸಾಯಿ ಖಾನೆ ಮತ್ತು ಮಾರಾಟ ಮಳಿಗೆಗಳ ಪರವಾನಗಿ ಮತ್ತು ಬಿಲ್ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಮಾತ್ರವಲ್ಲದೆ ಮಳಿಗೆಗಳಲ್ಲಿ ಮಾರಾಟವಾಗುವ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ಇರುವಂತೆ ಮೇಯರ್ ಸೂಚನೆ ನೀಡಿದ್ದಾರೆ.
ಅ.13ರ ಮಂಗಳವಾರ ಕೂಡ ಹಾಲು ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಬಳಿ ನಡೆದಿತ್ತು.ಆರೋಪಿಗಳು ಹಾಸನದಿಂದ ಕುದ್ರೋಳಿಗೆ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿತ್ತು.