ಬಂಟ್ವಾಳ: ಕಳೆದ ಸೆ.26ರಂದು ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿಯ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸಕಲೇಶಪುರದ ನಿವಾಸಿ ಪಾತೂರು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಅಶ್ರಫ್ (28) ಬಂಧಿತ ಆರೋಪಿ.
ಬಾಳೆಪುಣಿ ಗ್ರಾಮದ ಅವಿವಾಹಿತೆ ಮಹಿಳೆ ಕುಸುಮಾ(53) ತಮ್ಮ ಬೆಳ್ಳೇರಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೆ.26ರಂದು ಮಹಿಳೆಯ ಸಹೋದರ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದಿರುವುದರಿಂದ ಕೆಲಸಗಾರ್ತಿ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಅವರನ್ನು ಕೊಲೆಗೈಯಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಇದೀಗ ಪ್ರಕರಣದ ಆರೋಪಿ ಮಹಮ್ಮದ್ ಅಶ್ರಫ್ ನನ್ನ ಪೊಲೀಸರು ಬಂಧಿಸಿದ್ದಾರೆ
ಸಕಲೇಶಪುರದ ಅಶ್ರಫ್ ಗೆ ಬಂಟ್ವಾಳದ ನಂಟು ?
ಕುಸುಮಾ ಅವರ ನಿವಾಸದ ಎದುರು ವಾಸಿಸುವ ಗಿರೀಶ್ ಅವರ ತೋಟದ ಕೆಲಸಕ್ಕೆಂದು ಅಶ್ರಫ್ ಬಂದಿದ್ದನು. ಅಶ್ರಫ್ ಈ ಹಿಂದೆ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಂತರ ಆತ ಆಟೋವನ್ನು ಮಾರಾಟ ಮಾಡಿದ್ದು, ಕೂಲಿ ಕೆಲಸ ಮಾಡುತ್ತಿದ್ದನು. ಆತನ ಪತ್ನಿಯ ಮನೆ ಮುಡಿಪು ಸಮೀಪ ಪಾತೂರು ಆಗಿತ್ತು. ಅಲ್ಲಿ ಕೂಡ ಸ್ವಲ್ಪ ಸಮಯ ವಾಸವಾಗಿದ್ದ. ಅಲ್ಲದೆ ಹೂಹಾಕುವ ಕಲ್ಲು ಬಳಿ ನವಗ್ರಾಮ ಸೈಟ್ ನಲ್ಲಿ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಮಹಿಳೆಯ ಮನೆಯೊಳಗೆ ನುಗ್ಗಿದ್ದ ಅಶ್ರಫ್ ನಗದು ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಕಳ್ಳತನ ನಡೆಸಿದ್ದಾನೆ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ವೇಳೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಬೆಳಕಿಗೆ ಬಂದಿತ್ತು . ಗಂಭೀರ ಹಲ್ಲೆಯಿಂದ ಮಹಿಳೆ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.