Sunday, May 19, 2024
Homeಕರಾವಳಿಬೆಳ್ತಂಗಡಿ: ಸವಣಾಲಿನ ಇತ್ತಿಲಪೇಲ ಪ್ರದೇಶಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ; ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಸಭೆ...

ಬೆಳ್ತಂಗಡಿ: ಸವಣಾಲಿನ ಇತ್ತಿಲಪೇಲ ಪ್ರದೇಶಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ; ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ!

spot_img
- Advertisement -
- Advertisement -

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಸವಣಾಲು ಗ್ರಾಮದ ಇತ್ತಿಲಪೇಲ ಪ್ರದೇಶಕ್ಕೆ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರರವರು ಗುರುವಾರ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡರು.



ಕುದುರೆಮುಖ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಸುತ್ತಮುತ್ತಲಿರುವ ಜನವಸತಿ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ಪರಿಶೀಲನೆ ಜಿಲ್ಲಾಧಿಕಾರಿಯವರ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು, ಶಾಸಕ ಹರೀಶ್ ಪೂಂಜ, ಡಿ.ಎಫ್.ಒ., ಐಟಿಡಿಪಿ ಅಧಿಕಾರಿಗಳು, ತಹಶೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ಅರಣ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ದಂಡೇ ಇಂದು ಸವಣಾಲು ಗ್ರಾಮದ ಹಿತ್ತಿಲಪೇಲಕ್ಕೆ ಭೇಟಿ ನೀಡಿತ್ತು.

ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು, ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬೆಳ್ತಂಗಡಿ ತಾಲೂಕಿನ ಒಂಬತ್ತು ಗ್ರಾಮಗಳಿದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕೆಲವೊಂದು ತೊಡಕುಗಳಿವೆ. ಇಲ್ಲಿನ ಜನರಿಗೆ ಅತಿ ಅಗತ್ಯದ ಬೇಡಿಕೆಯಾಗಿರುವ ರಸ್ತೆ ಹಾಗೂ ವಿದ್ಯುತ್ ಸಮಸ್ಯೆಯನ್ಬು ಬಗೆಹರಿಸಲು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಭಿವೃದ್ಧಿ ಕಾರ್ಯಗಳಿಗೆ ಇರುವ ತೊಡಕುಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸ್ಥಳದಲ್ಲಿಯೇ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿಯವರು, ಶಾಸಕ ಹರೀಶ್ ಪೂಂಜಾ ರವರ ನೇತೃತ್ವದಲ್ಲಿ ಸಭೆ ನಡೆಸಿ ಯಾವ ರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಗಮನಹರಿಸುವಿದಾಗಿ ತಿಳಿಸಿದರು.

ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನಿಂದ ಹೊರಬರುವವರಿಗಾಗಿ ಇರುವ ಪುನರ್ವಸತಿ ಪ್ಯಾಕೇಜ್ ಅನ್ನು ಚುರುಕುಗೊಳಿಸಿ, ಹೊರಬರಲು ಸಿದ್ದರಿರುವವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೂಲನಿವಾಸಿಗಳಿಗೆ ಕುಲಕಸುಬಿಗೆ ಬೇಕಾದ ಕಚ್ಚಾವಸ್ತುಗಳು ಹಾಗೂ ಅರಣ್ಯ ಉತ್ಪನ್ನಗಳನ್ನು ಶೇಖರಿಸಲು ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಜನರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಮೂಲನಿವಾಸಿಗಳಿಗೆ ಇರುವ ಹಕ್ಕುಗಳನ್ನು ಯಾವುದೇಕಾರಣಕ್ಕೂ ಮೊಟಕುಗೊಳಿಸಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಬುಡಕಟ್ಟುಸಮುದಾಯಗಳ ವಾಸಸ್ಥಾನ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ 133ಕೋಟಿಯ ಕಾರ್ಯಯೋಜನೆಯ ವರದಿಯನ್ನು ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರದೇಶಗಳು ಬೆಳ್ತಂಗಡಿಯಲ್ಲೇ ಬರುತ್ತದೆ. ಇದಕ್ಕೆ ಅನುಮೋದನೆ ದೊರೆತರೆ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸ್ಥಳೀಯ ಜನರ ಪರವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರುಗಳಾದ ಶೇಖರ ಲಾಯಿಲ ಹಾಗೂ ಜಯಾನಂದ ಪಿಲಿಕಳ ಅವರು ಕಳೆದ ಎರಡು ದಶಕಗಳಿಂದ ಇಲ್ಲಿನ ಜನರಿಗೆ ಸೌಲಭ್ಯಗಳು ಸಿಕ್ಕಿಲ್ಲ, ರಸ್ತೆ ಹಾಗೂ ವಿದ್ಯುತ್ ಜನರ ಮುಖ್ಯ ಬೇಡಿಕೆಯಾಗಿದೆ. ಅರಣ್ಯ ಹಕ್ಕುಗಳ ಅಡಿಯಲ್ಲಿಯೇ ಸೌಲಭ್ಯಗಳನ್ನು ಒದಗಿಸಲು ಅವಕಾಶವಿದ್ದು ಅದನ್ನು ಒದಗಿಸುವಂತೆ ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್, ಗ್ರೇಡ್-2 ತಹಸೀಲ್ದಾರ್ ಮಹಮ್ಮದ್ ಅಕ್ರಂ ಪಾಷ, ಕಾರ್ಕಳ ವಿಭಾಗ ವನ್ಯಜೀವಿ ಅರಣ್ಯ ಇಲಾಖೆ ಡಿಎಫ್ ಓ ರುದ್ರೇನ್, ಎಸಿ ಎಫ್ ಕಾಜಲ್, ಐಟಿಡಿಪಿ ಜಿಲ್ಲಾ ಅಧಿಕಾರಿ ಡಾ| ಹೇಮಾಲತ, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ., ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಜಯಪ್ರಕಾಶ್, ಜಿ.ಪಂ.ಎಂಜಿನಿಯರಿಂಗ್ ಎಇಇ ಸೂರ್ಯನಾರಾಯಣ ರಾವ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ, ಐಟಿಡಿಪಿ ತಾಲೂಕು ಅಧಿಕಾರಿ ಹೇಮಲತಾ, ಗ್ರಾಮ ಕರಣಿಕ ರವಿ, ತಾ.ಪಂ. ಮಾಜಿ ಸದಸ್ಯ ಸುಧೀರ್ ಆರ್. ಸುವರ್ಣ, ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ, ಗ್ರಾ.ಪಂ. ಕಾರ್ಯದರ್ಶಿ ನಿರ್ಮಲ ಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಜಯಲಕ್ಷ್ಮೀ ಸುಮಲತಾ, ಲೋಕನಾಥ, ಚಂದ್ರರಾಜ, ಹೆಚ್. ಪ್ರಭಾಕರ್ ಆದಿವಾಸಿ ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯಾನಂದ ಶೇಖರ್ ಲಾಯಿಲ, ಪ್ರಮುಖರಾದ ಬಾಲಕೃಷ್ಣ ವಿ. ಶೆಟ್ಟಿ ಸಂತೋಷ್ ಗೌಡ, ಗಣೇಶ್ ಭಂಡಾರಿ, ಬಾಲಕೃಷ್ಣ ಶೆಟ್ಟಿ ಸ್ಥಳೀಯರಾದ ಡೊಂಬಯ್ಯ ಮಲೆಕುಡಿಯ, ಮಲೆಕುಡಿಯ, ಮಹಾಬಲ ಮಲೆಕುಡಿಯ, ಶ್ರೀಧರ, ವಸಂತ್ರ, ಶ್ರೀನಿವಾಸ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಸುಲ್ಕೇರಿಮೊಗ್ರು ಮಾಳಿಗೆ ಪ್ರದೇಶಕ್ಕೆ ಮೂರು ತಿಂಗಳಿನಲ್ಲಿ ವಿದ್ಯುತ್ ಸೌಲಭ್ಯ:

ಶಾಸಕ ಹರೀಶ್ ಪೂಂಜ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಸುಲ್ಕೇರಿಮೊಗ್ರು ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೆ ಒಂದು ಸುತ್ತಿನ ಅನುಮತಿಯನ್ನು ಪಡೆಯಲಾಗಿದ್ದು ಅಂತಿಮ ಅನುಮತಿಗಾಗಿ ಕಡತಗಳನ್ನು ಸಲ್ಲಿಸಲಾಗಿದೆ.ಮೂರು ತಿಂಗಳಿನಲ್ಲಿ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರಾಷ್ಟ್ರೀಯ ಉದ್ಯಾನವನದೊಳಗಿನ ಇತರ ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಯ ಉದ್ಯಾನವನದೊಳಗೆ ರಸ್ತೆ ಅಭಿವೃದ್ಧಿ ಬಗ್ಗೆಯೂ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಉದ್ಯಾನವನದ ಹೊರಗಿರುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರು ಹೇಳಿದರು.



ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ರಸ್ತೆ, ವಿದ್ಯುತ್ ಸೇರಿದಂತೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ನಾವು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ನೀಡಿದ್ದು , ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿರವರು ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ಸಭೆ ನಡೆಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆ 2006 ರ ಜಾರಿಗೆ ನಮ್ಮ ಸಂಘಟನೆ ಒತ್ತಾಯಿಸಿದ್ದು , ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ಸಿಕ್ಕಿದೆ. ಜಿಲ್ಲಾಡಳಿತ ಸ್ಪಂದಿಸದಿದ್ದರೆ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಜಯನಂದ ಪಿಲಿಕಲ ಹೇಳಿದರು.

ಆದಿವಾಸಿ ಕುಟುಂಬದ ಅಡುಗೆಮನೆಗೆ ಹೊಕ್ಕ ಜಿಲ್ಲಾಧಿಕಾರಿ;

ಸಭೆ ಬಳಿಕ ಡೊಂಬಯ್ಯ ಮಲೆಕುಡಿಯ ಅವರ ಮನೆಯೊಳಗೆ ತೆರಳಿದ ಜಿಲ್ಲಾಧಿಕಾರಿಯವರು ಅಡುಗೆ ಮನೆಗೆ ತರಳಿ ಅಲ್ಲಿ ಐಟಿಡಿಪಿ ಯೋಜನೆಯಲ್ಲಿ ಆದಿವಾಸಿ ಕುಟುಂಬಗಳಿಗೆ ನೀಡುವ ಆಹಾರ ಸಾಮಾಗ್ರಿಗಳನ್ನು ಪರಿಶೀಲಿಸಿದರು. ಅದರ ಗುಣಮಟ್ಟದ ಬಗ್ಗೆ ಕುಟುಂಬದ ಮಹಿಳೆಯರೊಂದಿಗೆ ಪ್ರಶ್ನಿಸಿ ಅದನ್ನು ಸರಿಯಾಗಿ ಉಪಯೋಗಿಸುವಂತೆ ಸಲಹೆ ನೀಡಿದರು.ಇಲ್ಲಿನ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ತಿಳಿದುಕೊಂಡು ಈ ಪ್ರದೆಶದಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.



ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯವರು ನೀಡಿದ ದೂರಿನಂತೆ ಆಯೋಗ ಜಿಲ್ಲಾಧಿಕಾರಿಯವರಿಗೆ ವರದಿ ನೀಡುವಂತೆ ಸೂಚಿಸಿದ್ದು ಈ ಹಿನ್ನಲೆಯಲ್ಲಿ ಈ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಯವರು ಬೆಳ್ತಂಗಡಿ ತಾಲೂಕಿನ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಪ್ರದೇಶಕ್ಕೆ ಭೇಟಿ ನೀಡಿದರು.

ಒಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಜೊತೆಗೆ ಮಂಗಳೂರು ಮತ್ತು ಬೆಳ್ತಂಗಡಿಯಿಂದ ಆಗಮಿಸಿದ್ದ ಅಧಿಕಾರಿಗಳ ದಂಡೇ ದುರ್ಗಮ ರಸ್ತೆಯಲ್ಲಿ ಎದ್ದು ಬಿದ್ದು ಹಿತ್ತಿಲಬೇಲೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.ಇನ್ನಾದರು ತಮ್ಮ ಮೂಲಭೂತ ಸಮಸ್ಯೆಗಳಿಗೊಂದು ಶೀಘ್ರ ಪರಿಹಾರ ಸಿಗಬಹುದೆಂಬ ಆಶಾವಾದ ಈ ಭಾಗದ ನಿವಾಸಿಗಳಲ್ಲಿ ಮೂಡಿದೆ.

- Advertisement -
spot_img

Latest News

error: Content is protected !!