ಮಂಗಳೂರು:ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಂಗಳೂರಿನಲ್ಲಿ ವಾಸವಿರುವ ಅಫ್ಘಾನಿಗರಿಗೆ ಶನಿವಾರ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸಂವಹನ ನಡೆಸಿ ಧೈರ್ಯ ತುಂಬಿದ್ದು,ಅವರಿಗೆ ಸುರಕ್ಷತೆಯ ಭರವಸೆಯನ್ನು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, 58 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಆಫ್ಘಾನಿಸ್ತಾನಕ್ಕೆ ವಾಪಸ್ ತೆರಳಿದ್ದು ಉಳಿದ 47 ಮಂದಿಯ ಪೈಕಿ ಕೆಲವು ಮಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಇಲ್ಲೇ ಉಳಿದುಕೊಂಡಿದ್ದಾರೆ. ಅವರು ನಮ್ಮಲ್ಲಿ ಮನವಿ ಸಲ್ಲಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಿದೆ ಎಂದರು .
ಇನ್ನು ಇದೇ ವೇಳೆ ಅಫ್ಘಾನಿಗರು, ಅಂತಿಮ ವರ್ಷದ ವಿದ್ಯಾರ್ಥಿಗಳ ವೀಸಾ ಸೆಪ್ಟೆಂಬರ್ ವೇಳೆಗೆ ಮುಗಿಯಲಿದ್ದು ಸುಮಾರು 6 ತಿಂಗಳುಗಳವರೆಗೆ ವೀಸಾ ವಿಸ್ತರಣೆ ಮಾಡಿದರೆ ಅನುಕೂಲವಾಗಿತ್ತದೆ. ಅಫ್ಘಾನಿಸ್ತಾನಕ್ಕೆ ಹೋಗಿ ಬಾಕಿಯಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭ್ಯಾಸ ಮುಂದುವರಿಸಲು ಸರ್ಕಾರ ಮರಳಿ ಬರಲು ಸಹಾಯ ಮಾಡಿದರೆ ಉತ್ತಮ. ಇದಲ್ಲದೆ ಮರಳಿ ತಮ್ಮ ಕುಟುಂಬಗಳೊಂದಿಗೆ ಸೇರಲು ಬಯಸುವವರಿಗೆ ಭಾರತ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಒಂದು ವೇಳೆ ಇಲ್ಲೇ ಉಳಿದು ತಮ್ಮ ವಾಸ್ತವ್ಯವನ್ನು ಮುಂದುವರಿಸಲು ಬಯಸುವವರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡುವಂತೆ ಹಾಗೂ ಇಲ್ಲಿನ ವಿದ್ಯಾರ್ಥಿಗಳು ಕೆಲಸ ಮಾಡಲು ಸ್ವಲ್ಪ ಅನುಕೂಲಕರ ವ್ಯವಸ್ಥೆ ಕಲ್ಪಿಸಿದರೆ ಪರಿಸ್ಥಿತಿ ಸಹಜವಾಗುವವರೆಗೆ ಅವರು ತಮ್ಮ ಜೀವನೋಪಾಯವನ್ನು ನೋಡಿಕೊಳ್ಳಬಹುದಾಗಿದೆ ಇತ್ಯಾದಿ ಮನವಿಯನ್ನು ಸಲ್ಲಿಸಿದ್ದಾರೆ.