ಮಂಗಳೂರು: ಇಲ್ಲಿನ ಲೇಡಿಹಿಲ್ ಬಳಿ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರ ಮೇಲೆ ಕಾರು ಚಾಲಕನೋರ್ವ ಕಾರು ಹರಿಸಿ ಪರಾರಿಯಾದ ಘಟನೆ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಒರ್ವ ಮಹಿಳೆ ಸಾವನ್ನಪ್ಪಿದ್ದು, ಒರ್ವ ಬಾಲಕಿ ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಇದಕ್ಕೆ ಕಾರು ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ನಡೆದ ಈ ಅಪಘಾತದಲ್ಲಿ ರೂಪಶ್ರೀ(23) ಎಂಬವರು ಸಾವನ್ನಪ್ಪಿದ್ದಾರೆ. ಸುರತ್ಕಲ್ ನ ಕಾನ ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ. ಸ್ವಾತಿ(26) ಹಿತನ್ವಿ(16),ಕಾರ್ತಿಕಾ(16) ಮತ್ತು ಯತಿಕಾ(12) ಗಾಯಗೊಂಡವರು.
ಇನ್ನು ಅಪಘಾತದ ಬಳಿಕ ಕಾರಿನೊಂದಿಗೆ ಪರಾರಿಯಾದ ಇಯಾನ್ ಕಾರ್ ಚಾಲಕ ಕಮಲೇಶ್ ಬಲದೇವ್ ಬಳಿಕ ತಂದೆಯ ಜೊತೆ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ.
ಘಟನೆಯ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


