ಉಡುಪಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ತನ್ನ ಚಿಕ್ಕಮ್ಮನನ್ನೇ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸೂಟ್ ಕೇಸ್ ಒಳಗೆ ಹಾಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಶಿವಳ್ಳಿಯ ಮಂಚಿಕುಮೇರಿಯಲ್ಲಿ ನಡೆದಿದೆ .
ಉಡುಪಿಯ ಮಂಚಿ ಕುಮೇರಿಯ ಸುಮತಿ ಅವರನ್ನು ಅವರ ಅಕ್ಕನ ಮಗ ಮಂಗಳೂರಿನ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಎಂಬಾತ ಕೊಲೆ ಮಾಡಲು ಯತ್ನಿಸಿದ್ದಾರೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಸುಮತಿಯವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದರ್ಶನ್ ಎಂಬವರು ತನ್ನ ಮನೆಯಿಂದ ಸಮೀಪದ ಮೈದಾನದ ಕಡೆಗೆ ಹೋಗುತ್ತಿದ್ದಾಗ ಸ್ಥಳೀಯರಾದ ರಮಾನಾಥ ರೈ ಅವರ ಮನೆಯ ಕಡೆಗೆ ಇಬ್ಬರು ಹೋಗುತ್ತಿದ್ದುದನ್ನು ಗಮನಿಸಿದ್ದಾರೆ. ಅವರ ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗ್ ಕೂಡ ಇತ್ತು. ಈ ಹೊತ್ತಿಗೆ ರಮಾನಾಥ ರೈ ಮನೆಯಲ್ಲಿರಲಿಲ್ಲ. ಸ್ವಲ್ಪ ಸಮಯದ ಬಳಿಕ ರಮಾನಾಥ್ ರೈ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿತ್ತು ಹಾಗೂ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಕೂಗಿದರೂ ಪತ್ನಿ ಬಾಗಿಲು ತೆರೆಯದ ಕಾರಣ ನೆರೆಹೊರೆಯವರಾದ ಸುದರ್ಶನ್, ಮಿಥುನ್, ಮಹಮ್ಮದ್ ಇಸ್ಮಾಯಿಲ್, ಸದಾನಂದ್, ಹರೀಶ್, ಮೇಘಾ ಮೊದಲಾದವರ ಸಹಾಯ ಯಾಚಿಸಿದ್ದಾರೆ.
ತುಂಬಾ ಹೊತ್ತಿನ ಬಳಿಕ ಒಳಗಿನಿಂದ ಬಾಗಿಲು ತೆಗೆದ ಮಿಥುನ್ ಹಾಗೂ ನಾಗೇಶ್ ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಸ್ಥಳೀಯರು ಹಿಡಿದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಳಗೆ ಹೋಗಿ ನೋಡಿದಾಗ ಸುಮತಿಯವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಟ್ರಾಲಿ ಬ್ಯಾಗ್ನೊಳಗೆ ಹಾಕಿದ್ದು ಕಂಡು ಬಂತು. ಅರೆಪ್ರಜ್ಞಾವಸ್ಥೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.