ತೆಲಂಗಾಣ: ಕುಡಿತದ ಅಮಲು ಮನುಷ್ಯನನ್ನು ಏನೆಲ್ಲಾ ಮಾಡಿಸುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಇಂತಹದ್ದೇ ಘಟನೆಯೊಂದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಜೋಗಿಪೇಟ್ನ ನಿವಾಸಿಯಾದ 21 ವರ್ಷದ ಯುವಕ ಮತ್ತು ಮೇದಕ್ ಜಿಲ್ಲೆಯ ಚಂದೂರ್ ನಿವಾಸಿಯಾದ 22 ವರ್ಷದ ಯುವಕ ಇಬ್ಬರೂ ಒಂದು ಬಾರಿ ಧೂಮಪಾಲಾಪೇಟ್ ಗ್ರಾಮದಲ್ಲಿರುವ ಸಾರಾಯಿಿ ಅಂಗಡಿಯಲ್ಲಿ ಹೇಗೋ ಭೇಟಿಯಾಗಿದ್ದಾರೆ. ಇದೇ ಭೇಟಿ ಸ್ನೇಹಕ್ಕೆ ತಿರುಗಿದೆ. ನಂತರ ಆಗಾಗ್ಗೆ ಭೇಟಿಯಾಗಿ ಒಟ್ಟಿಗೇ ಕುಡಿಯುತ್ತಿದ್ದರು. ಏಪ್ರಿಲ್ 1ರಂದು ಕೂಡ ಇವರಿಬ್ಬರೂ ತೂರಾಡೋ ರೇಂಜಿಗೆ ಕುಡಿದಿದ್ದಾರೆ. ಅದೇ ಅಮಲಿನಲ್ಲಿ ಜೋಗಿನಾಥ್ ಗುಟ್ಟಾ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಬಳಿಕ ಇಬ್ಬರೂ ತಮ್ಮ-ತಮ್ಮ ಮನೆ ಹಾದಿ ಹಿಡಿದಿದ್ದಾರೆ.
ಮನೆಗೆ ಹೋಗಿ ಸ್ವಲ್ಪ ಹೊತ್ತಾದ ಮೇಲೆ ಇಬ್ಬರಿಗೂ ಕುಡಿದ ನಶೆ ಇಳಿದಿದೆ. ಒಂದೆರಡು ದಿನ ಬಿಟ್ಟು ತಾಳಿ ಕಟ್ಟಿಸಿಕೊಂಡ ಜೋಗಿಪೇಟ್ನ ಯುವಕ ಸೀದಾ ತಾಳಿಕಟ್ಟಿದಾತನ ಮನೆಗೆ ಬಂದಿದ್ದಾನೆ. ನಿಮ್ಮ ಮಗ ನನಗೆ ತಾಳಿ ಕಟ್ಟಿದ್ದಾನೆ. ನನಗೂ ಇಲ್ಲಿಯೇ ಅವನೊಂದಿಗೆ ಇರಲು ಅವಕಾಶ ಮಾಡಿಕೊಡಿ. ನಾನು ಬೇರೆಲ್ಲೂ ಹೋಗಲು ಸಾಧ್ಯವಿಲ್ಲ ಎಂದು ಆತನ ತಂದೆ-ತಾಯಿಯ ಬಳಿಯೂ ಮನವಿ ಮಾಡಿದ್ದಾನೆ. ಇದೇ ವಿಚಾರದಲ್ಗಿ ದೊಡ್ಡ ಗಲಾಟೆಯಾಗಿದೆ. ಕೊನೆಗೆ ತಾಳಿ ಕಟ್ಟಿದಾತ ನಿನಗೆ ನನ್ನ ಮನೆಯಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದಿದ್ದಾನೆ. ತಾಳಿ ಕಟ್ಟಿಸಿಕೊಂಡ ಯುವಕ ಸೀದಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಅಷ್ಟೇ ಅಲ್ಲ, ನಾನು ತಾಳಿಕಟ್ಟಿಸಿಕೊಂಡಿದ್ದೇನೆ. ಈಗ ಮನೆಗೆ ಸೇರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹಾಗೊಮ್ಮೆ ನಾನು ಶಾಶ್ವತವಾಗಿ ದೂರ ಇರಬೇಕು ಎಂದರೆ ಆ ಕುಟುಂಬದವರು ನನಗೆ 1 ಲಕ್ಷ ರೂಪಾಯಿ ಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾನೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರು ಇಬ್ಬರೂ ಯುವಕರ ಕುಟುಂಬದವರು ಸೇರಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ.