ಮೈಸೂರು; ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದವನಿಗೆ ಅರಣ್ಯ ಇಲಾಖೆ ಅಧಿಕಾರಿಗಳು 25 ಸಾವಿರ ರೂಪಾಯಿ ದಂಡ ಹಾಕಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ನಿವಾಸಿ ಆರ್ ಬಸವರಾಜು ತನ್ನ ಹುಚ್ಚಾಟಕ್ಕೆ ಸರಿಯಾಗಿ ಬೆಲೆ ತೆತ್ತ ವ್ಯಕ್ತಿ.

ಆರ್ ಬಸವರಾಜು ಬಂಡೀಪುರದ ಬಂಕಾಪುರ ದೇವಸ್ಥಾನಕ್ಕೆ ಹೋಗಿದ್ದ. ಈ ವೇಳೆ ಬಂಡೀಪುರದ ಊಟಿ ರಸ್ತೆಯಲ್ಲಿ ಕಾಡಿನೊಳಗೆ ಹೋಗಿ ಕಾಡಾನೆ ಜೊತೆ ಸೆಲ್ಫಿಗೆ ಮುಂದಾಗಿದ್ದ. ಆಗ ಬಸವರಾಜುನನ್ನು ಅಟ್ಟಾಡಿಸಿಕೊಂಡು ಬಂದು ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಬಸವರಾಜ್ ಅದೃಷ್ಟವಶಾತ್ ಪಾರಾಗಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆ ಅಧಿಕಾರಿಗಳು ಬಸವರಾಜುವಿನ ನಂಜನಗೂಡಿನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದು 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಅಲ್ಲದೇ ತಪ್ಪೊಪ್ಪಿಗೆ ವೀಡಿಯೋ ಮಾಡಿಸಿದ್ದಾರೆ. ತಿಳುವಳಿಕೆಯ ಕೊರತೆಯಿಂದ ಕೃತ್ಯ ಎಸಗಿರುವುದಾಗಿ ಬಸವರಾಜು ಹೇಳಿದ್ದಾನೆ,.


