ಸುಳ್ಯ: ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಬಿಹಾರ ಮೂಲದ ಯುವಕರಲ್ಲಿ ಓರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯದ ಅರಂಬೂರಿನಲ್ಲಿ ನಡೆದಿದೆ.
ಅರಂಬೂರಿನ ಪ್ರೀತಂ ಹೊಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಯುವಕರು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕ ಸಮೀಪ ಪಯಸ್ವಿನಿ ನದಿಗೆ ಹೋಗಿದ್ದರು. ಸ್ನಾನಕ್ಕೆ ಹೋದವರಲ್ಲಿ ಕುಂದನ್ ಎಂಬ ಯುವಕ ನಾಪತ್ತೆಯಾಗಿದ್ದ ಎನ್ನಲಾಗಿದೆ. ಈತ ಬಾರದಿರುವ ವಿಚಾರ ಸಂಜೆಯ ವೇಳೆಗೆ ಯುವಕರಿಗೆ ಗೊತ್ತಾಗಿದ್ದು, ಸಂಜೆಯ ಬಳಿಕ ಹುಡುಕಾಡಿದರೂ ಆತನ ಪತ್ತೆಯಾಗಲಿಲ್ಲ. ಇಂದು ಬೆಳಿಗ್ಗೆ ಪೈಚಾರಿನ ಆರ್.ಬಿ.ಬಶೀರ್ ನೇತೃತ್ವದ ಮುಳುಗು ತಜ್ಞರ ತಂಡ ಕುಂದನ್ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆರ್.ಬಿ.ಬಶೀರ್ ಜೊತೆಗೆ ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ರಿಫಾಯಿ ಸೋಣಂಗೇರಿ, ಬಶೀರ್ ಕೆ.ಪಿ. ಮೊದಲಾದವರು ಭಾಗವಹಿಸಿದ್ದರು. ರಂಝಾನ್ ಉಪವಾಸವಿದ್ದರೂ ಯುವಕನ ಮೃತದೇಹ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ ಯುವಕ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.