ಕಾರ್ಕಳ: ಒಡಿಶಾದ ಖಾಸಗಿ ಕಂಪೆನಿಯಲ್ಲಿ ಕೆಲಸಕಿದ್ದ ಕಾರ್ಕಳ ಮೂಲದ ಯುವಕನೋರ್ವ ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಚಿಕಿತ್ಸೆ ಫಲಿಸದೆ ದಾರಿ ಮಧ್ಯೆ ಮೃತಪಟ್ಟಿದ್ದು, ಪುತ್ರನ ಶವ ಪಡೆಯಲು ತಾಯಿ 3 ದಿನಗಳಿಂದ ಅನ್ನಾಹಾರ ಸೇವಿಸಿದೆ ಕಾಯುತ್ತಲಿದ್ದರು.
ಒಡಿಶಾ ಪೊಲೀಸರ ಅಸಹಕಾರದಿಂದ ಹಸ್ತಾಂತರ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಕೊನೆಗೆ ಶನಿವಾರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಪುತ್ರನ ಮೃತದೇಹವನ್ನು ಕಾರ್ಕಳ ಪೊಲೀಸರು ತಾಯಿಗೆ ಹಸ್ತಾಂತರಿಸಿದರು.
ಕಸಾಬಾ ನಿವಾಸಿ ಧಮೇಂದ್ರ ಅವರ ಅಣ್ಣನ ಪುತ್ರ ಕಾರ್ತಿಕ್ (25) ಐದು ವರ್ಷಗಳಿಂದ ಮಂಗಳೂರು ಪ್ಲಾನ್ ಟೆಕ್ ಕಂಪೆನಿಯಲ್ಲಿ ಸೇಫ್ಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅನಂತರ ಒಡಿಶಾಕ್ಕೆ ತೆರಳಿ ಅದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜ. 14ರಂದು ಮಂಗಳೂರು ಕಂಪೆನಿಯ ಮ್ಯಾನೇಜರ್ ಕುಶಲ್ ಅವರು ಧರ್ಮೆಂದ್ರ ಅವರಿಗೆ ಕರೆ ಮಾಡಿ ಕಾರ್ತಿಕ್ ವಿಷಾಹಾರ ಸೇವಿಸಿದ್ದಾನೆ. ಆತನ ಸ್ನೇಹಿತರು ಕಟಕ್ನ ರಿಲಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಧಮೇಂದ್ರವರು ಆತನ ಪೋಷಕರಿಗೆ ವಿಚಾರ ತಿಳಿಸಿ ಸಂಬಂಧಿಕರಾದ ವೇಲು ಮತ್ತು ಕೃಷ್ಣ ಜತೆ ಜ. 17ರಂದು ಕಟಕ್ ತಲುಪಿದ್ದರು.