ಮುಂಬೈ, ಮೇ 19 : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ, ಕೊರೊನಾ ಹರಡದಂತೆ ತಡೆಯಲು 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35,058. ಇದುವರೆಗೂ 1249 ಜನರು ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿಯೇ ಸೋಂಕಿತರ ಸಂಖ್ಯೆ 21,335.
ಯಾವುದಕ್ಕೆ ವಿನಾಯಿತಿ?
- ತುರ್ತು ಸೇವೆ, ಏರ್ ಆಂಬ್ಯುಲೆನ್ಸ್ಗಳಿಗೆ ವಿನಾಯಿತಿ ನೀಡಲಾಗಿದೆ.
- ಕೆಂಪು ವಲಯದಲ್ಲಿಯೂ ಕಾರ್ಖನೆ, ನಿರ್ಮಾಣ ಹಂತದ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
- ಶಾಲಾ/ಕಾಲೇಜು ತೆರೆಯುವುದಿಲ್ಲ. ಆನ್ಲೈನ್ ಕ್ಲಾಸ್ಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ಯಾವುದಕ್ಕೆ ಅವಕಾಶವಿಲ್ಲ?
- ಬೇರೆ ದೇಶಿಯ, ವಿದೇಶಿ ವಿಮಾನಗಳ ಸಂಚಾರಕ್ಕೆ ಅವಕಾಶವಿಲ್ಲ.
- ಮೆಟ್ರೋ ರೈಲು ಸೇವೆ ಸಹ ಇರುವುದಿಲ್ಲ.
- ಎಲ್ಲಾ ದೇವಾಲಯ, ಚರ್ಚ್, ಮಸೀದಿ ಬಾಗಿಲು ತೆರೆಯಬಾರದು ಎಂದು ಸೂಚನೆ ನೀಡಲಾಗಿದೆ.
- ಧಾರ್ಮಿಕ ಕಾರ್ಯಕ್ರಮ, ಜನರನ್ನು ಸೇರಿಸಿ ಸಮಾವೇಶ ನಡೆಸುವುದನ್ನು ನಿರ್ಬಂಧಿಸಲಾಗಿದೆ.
- ಮಾಲ್, ಥಿಯೇಟರ್, ಬಾರ್, ರೆಸ್ಟೋರೆಂಟ್ ಬಾಗಿಲು ತೆರೆಯಬಾರದು ಎಂದು ತಿಳಿಸಲಾಗಿದೆ.
ರಾಜ್ಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಸಂಜೆ 7 ರಿಂದ ಬೆಳಗ್ಗೆ 7ರ ತನಕ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಸಂಜೆ 7ರಿಂದ ಬೆಳಗ್ಗೆ 7ರ ತನಕ ಸಂಚಾರ ನಡೆಸಬಾರದು ಎಂದು ಸೂಚನೆ ನೀಡಿದೆ.
65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಂಚಾರ ನಡೆಸುವಂತಿಲ್ಲ ಎಂದು ಮಾರ್ಗಸೂಚಿ ಹೇಳಿದೆ.