ಬೆಂಗಳೂರು : ಶುಭ ಸಮಾರಂಭಗಳಲ್ಲಿ ಚಿನ್ನ, ನಗದು ಕಳ್ಳತನ ಮಾಡುತ್ತಿದ್ದ ಉಪನ್ಯಾಸಕಿ ಅರೆಸ್ಟ್ ಆಗಿರುವ ಘಟನೆ ಬಸವನಗುಡಿಯಲ್ಲಿ ನಡೆದಿದೆ. ಕೆ.ಆರ್.ಪುರಂ ನಿವಾಸಿ ರೇವತಿ ಬಂಧಿತ ಆರೋಪಿ. ಆರೋಪಿಯಿಂದ ಒಟ್ಟು 32 ಲಕ್ಷ ರೂಪಾಯಿ ಮೌಲ್ಯದ 262 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ನ.25ರಂದು ಇದೇ ರೀತಿ ಬಸವನಗುಡಿಯ ದ್ವಾರಕನಾಥ ಕಲ್ಯಾಣ ಮಂಟಪದಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಾಗ ರೇವತಿ ಸಿಕ್ಕಿಬಿದ್ದಿದ್ದಾಳೆ. ವಿಚಾರಣೆ ವೇಳೆ ಇನ್ನೂ ಮೂರು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ರೇವತಿ ಬೆಳ್ಳಂದೂರಿನ ಖಾಸಗಿ ಕಾಲೇಜಿನಲ್ಲಿ ಕನ್ನಡ ಭಾಷೆಯ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರದಂದು ನಡೆಯುವ ಶುಭ ಸಮಾರಂಭಗಳಿಗೆ ಹೋಗಿ ಅಲ್ಲಿ ಸಿಕ್ಕವರ ಜೊತೆ ಸಂಬಂಧಿಕರಂತೆ ಆತ್ಮೀಯವಾಗಿ ಮಾತನಾಡಿ, ಬಳಿಕ ಚಿನ್ನಾಭರಣ, ಹಣ ಇಟ್ಟಿರುವ ಕೊಠಡಿಗಳನ್ನು ಪತ್ತೆ ಹಚ್ಚಿ, ಯಾರೂ ಇಲ್ಲದ ಸಮಯ ನೋಡಿಕೊಂಡು ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.


