ಕೇರಳ: ಮಗನ ವಿದ್ಯಾಭ್ಯಾಸಕ್ಕಾಗಿ ಶಿಕ್ಷಕಿಯೊಬ್ಬರ 500 ರೂಪಾಯಿ ಸಾಲ ಕೇಳಿದ ಮಹಿಳೆಗೆ 51 ಲಕ್ಷ ರೂಪಾಯಿ ದೊರೆತ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಪಾಲಕ್ಕಾಡ್ ನ ಕೂಟ್ಟನಾಡ್ ನಿವಾಸಿ ಸುಭದ್ರ ಎಂಬ ಮಹಿಳೆ ತನ್ನ ಮಗನ ಶಿಕ್ಷಕಿ ಗಿರಿಜಾ ಹರಿಕುಮಾರ್ ಬಳಿ ರೂ. 500 ಸಹಾಯ ಕೇಳಿದ್ದರು. ಶಿಕ್ಷಕಿಯು ಮಹಿಳೆಗೆ ಒಂದು ಸಾವಿರ ರೂಪಾಯಿ ಸಾಲ ನೀಡಿದ್ದಲ್ಲದೆ ಮಹಿಳೆಯ ಕುಟುಂಬದ ಬವಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ದಾನಿಗಳು ಸುಭದ್ರರ ಖಾತೆಗೆ ಒಂದೇ ದಿನದಲ್ಲಿ 51 ಲಕ್ಷ ರೂಪಾಯಿಯನ್ನು ಜಮೆ ಮಾಡಿದ್ದಾರೆ.
ಮಹಿಳೆಯ ಗಂಡ ಕೂಲಿ ಕಾರ್ಮಿಕರಾಗಿರುವ ರಾಜನ್ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದರು. ಎರಡನೆಯ ಮಗ ಅತುಲ್ ರಾಜ್ ‘ಸೆರೆಬ್ರಲ್ ಪಾಲ್ಸಿ’ ಕಾಯಿಲೆಯಿಂದ ಬಳಲುತ್ತಿದ್ದು, ಅವನನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಮಹಿಳೆಗೆ ಸಾಧ್ಯವಿರಲಿಲ್ಲ. ಮೂರನೆಯ ಮಗ ಅಭಿಷೇಕ್ ರಾಜ್ ಕಲಿಯುತ್ತಿರುವ ಶಾಲೆಯ ಶಿಕ್ಷಕಿ ಗಿರಿಜಾ ಹರಿಕುಮಾರ್ ಅವರ ಒಂದು ಪೋಸ್ಟ್ ಇಷ್ಟೆಲ್ಲ ಹಣ ಹರಿದು ಬರಲು ಕಾರಣವಾಗಿದೆ ಎನ್ನಲಾಗಿದೆ.